Aug 26, 2010

ಸೇಡಿನ ಹೊಸ ಬಗೆ...!!!

ತುರ್ತಾಗಿ ನಿನ್ನ ಮೇಲೆ
ಸೇಡು ತೀರಿಸಿಕೊಳ್ಳಬೇಕಿದೆ,
ತುಂಬಾ ಖುಶಿಯಿಂದ ಇದ್ದು,
ನಿನ್ನ ಮರೆಯಬೇಕಿದೆ.....


ಉಸಿರು ತಾಕುವಷ್ಟು ಹತ್ತಿರವೇ ಇದ್ದರೂ,
ಕೈಗೆ ಸಿಗದೇ ಇರಬೇಕಿದೆ......
ಒಳಗೊಳಗೆ ನೋವಿದ್ದರೂ,
ಮುಖದ ತುಂಬ ನಗು ತರಬೇಕಿದೆ......


ನಿನ್ನನ್ನೇ ಪ್ರೀತಿಸುತ್ತಾ ಇದ್ದರೂ,
ನಿನಗೆ ಹೇಳದೆ ಇರಬೇಕಿದೆ......
ಕಣ್ಣಲ್ಲಿ ನಿನ್ನದೇ ಚಿತ್ರ ನಿಂತರೂ,
ನಿನಗೆ ಕಾಣಿಸದೆ ಇರಬೇಕಿದೆ...


ಮನದ ತುಂಬಾ ನಿನ್ನದೇ ನೆನಪಿದ್ದರೂ,
ಹೃದಯದ ಹಾದಿ ತಪ್ಪಿಸಬೇಕಿದೆ....
ನೀ ನಡೆವ ದಾರಿಯಲ್ಲಿ ನಾನೇ ನಿಂತಿದ್ದರೂ,
ನಿನ್ನ ನೆರಳ ಸೋಕದೆ ನಿಲ್ಲಬೇಕಿದೆ...


ನಿನಗೆ ಫೋನ್ ಮಾಡಿದರೂ,
ಮಾತನಾಡದೇ ಸುಮ್ಮನೇ ಇರಬೇಕಿದೆ....
ಮರೆತು ಮೆಸೇಜ್ ಕಳಿಸಿದರೂ,
ಏನೂ ಬರೆಯದೇ ಬ್ಲ್ಯಾಂಕ್ ಇಡಬೇಕಿದೆ.....


ನೀನೇ ಉಸಿರೆಂದು ಗೊತ್ತಿದ್ದರೂ,
ಉಸಿರು ಹೊರಬಿಡಲೇಬೇಕಿದೆ....
ಹೊಸ ಉಸಿರಿಗೆ ದಾರಿ ಮಾಡಬೇಕಿದೆ...
ಮೂಗಿನ  ಹೊಳ್ಳೆ ತೆರೆಯಲೇಬೇಕಿದೆ.....

Aug 13, 2010

ನಾನ್ಯಾರು........?

ಇದೇ ಅಗಷ್ಟ್ ೧೫ ಕ್ಕೆ  ನನಗೆ ತೊಂಬತ್ತು ವರ್ಷ ವಯಸ್ಸು..... ಸ್ವಾತಂತ್ರ್ಯಪೂರ್ವದಲ್ಲಿ ಹುಟ್ಟಿದ್ದ ನಾನು ಈಗ ಜೈಲಿನಲ್ಲಿದ್ದೇನೆ....ನನ್ನದಲ್ಲದ ತಪ್ಪಿಗೆ...... ನನ್ನದೇನೂ ತಪ್ಪಿಲ್ಲ ಎಂದು ವಾದಿಸಲು ನನ್ನ ಜೊತೆ ಯಾರೂ ಇಲ್ಲ..... ಈಗ ನನಗೆ ಜೈಲಿನ ಹೊರಗೆ ಬಂದು ಸಾಧಿಸಲು ಎನೂ ಉಳಿದಿಲ್ಲ.... ಅದಕ್ಕಾಗಿಯೇ ನನಗೆ ಸಿಕ್ಕ ಕ್ಷಮಾದಾನವನ್ನೂ ತಿರಸ್ಕರಿಸಿ ಇಲ್ಲೇ ಉಳಿದಿದ್ದೇನೆ.....

ನಾನು ಹುಟ್ಟಿದ್ದು ೧೯೨೦ ಅಗಷ್ಟ್ ೧೫...... ಅಪ್ಪ ಅಮ್ಮನಿಗೆ ಒಬ್ಬನೇ ಮಗನಾಗಿದ್ದ ನನ್ನ ಮೇಲೆ ತುಂಬಾ ಜವಾಬ್ದಾರಿ ಇತ್ತು.... ಅಪ್ಪ ಅಮ್ಮನ ಅಭಿಲಾಷೆಯಂತೆ ನಾನು ಪದವೀಧರನಾದೆ..... ಅದೇ ಸಮಯದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟ ನನ್ನ ಮೇಲೆ ತುಂಬಾ ಪರಿಣಾಮ ಬೀರಿತ್ತು..... ದೇಶಕ್ಕಾಗಿ ಎನಾದರೂ ಮಾಡುವ ತುಡಿತ ನನ್ನಲ್ಲಿತ್ತು..... ನನ್ನ ಊರಿಗೆ ಬಂದಿದ್ದ ಗಾಂಧೀಜಿಯವರ ದಂಡೀಯಾತ್ರೆ ಮತ್ತು ಅವರ ಮಾತು ನನ್ನಲ್ಲಿನ ದೇಶಭಕ್ತಿಯನ್ನು ಜಾಗ್ರತಗೊಳಿಸಿತ್ತು..... ಆಂಗ್ಲರ ದುರಾಡಳಿತ ಮೇರೆ ಮೀರಿತ್ತು...... ಅಸಹಕಾರ ಚಳುವಳಿಯ ಮೂಲಕ ಭಾರತೀಯರು ಕರಾರುವಕ್ಕಾದ ಎದುರೇಟನ್ನೆ ನೀಡುತ್ತಿದ್ದರು..... ನಾನು ಮನೆ ಬಿಟ್ಟು ಗಾಂಧೀಜಿಯವರ ಚಳುವಳಿ ಸೇರಲು ತಯಾರಿ ನಡೆಸಿದ್ದೆ..... ನನ್ನ ಅಮ್ಮನಿಗೆ ನಾನು ಮನೆ ಬಿಟ್ಟು ಹೋಗುವುದು ಬೇಕಿರಲಿಲ್ಲ.... ಮನೆಯಲ್ಲಿದ್ದು ಏನಾದರೂ ಕೆಲಸ ಮಾಡಿಕೊಂಡಿರು ಎನ್ನುತ್ತಿದ್ದರು......

  ಭಾರತೀಯರ ದಂಗೆಯನ್ನು ಹತ್ತಿಕ್ಕಲು ಆಂಗ್ಲರು ತಮ್ಮ ಸೇನೆಯ ಶಕ್ತಿ ಹೆಚ್ಚಿಸಿಕೊಳ್ಳಲು ತಯಾರಿ ನಡೆಸಿದ್ದರು..... ನನ್ನ ಊರಲ್ಲೂ  ಸೇನೆಗೆ ಭರ್ತಿ ನಡೆಯುತ್ತಿತ್ತು..... ಈ ಕೆಲಸಕ್ಕೆ ಸೇರಲು ನನ್ನ ಅಮ್ಮ ಒತ್ತಾಯ ಹೇರುತ್ತಿದ್ದಳು..... ನನ್ನ ಗುರಿ ಆಂಗ್ಲರ ವಿರುದ್ಧ ಹೋರಾಡುವುದಾಗಿದ್ದರೆ, ಅಮ್ಮ ನನ್ನನ್ನು ಆಂಗ್ಲರಿಗಾಗಿ ಕೆಲಸ ಮಾಡಲು ಹಟ ಮಾಡುತ್ತಿದ್ದಳು... ಅಮ್ಮನಿಗೆ ನಾನು ಅವರನ್ನು ಬಿಟ್ಟು ದೂರ ಹೋಗುವುದು ಇಷ್ಟ ಇರಲಿಲ್ಲ ಅಷ್ಟೆ..... ಅಮ್ಮನ ಒತ್ತಾಯಕ್ಕೆ ಕಟ್ಟುಬಿದ್ದು ನಾನು ಪೋಲಿಸ್ ಕೆಲಸಕ್ಕೆ ಸೇರಿದೆ.... ಆದರೆ ದೇಶಕ್ಕಾಗಿ ಸೇವೆ ಮಾಡುವ ಕನಸು ನನ್ನಲ್ಲಿ ಸತ್ತಿರಲಿಲ್ಲ..... ಪೋಲಿಸ್ ಕೆಲಸಕ್ಕೆ ಸೇರಿದ್ದರೂ ನಾನು ಎಂದೂ ಭಾರತೀಯರ ವಿರುದ್ದ ಕೈ ಎತ್ತಿರಲಿಲ್ಲ.... ಇದು ಕೆಲವು ಆಂಗ್ಲ ಅಧಿಕಾರಿಗಳ ಕಣ್ಣೂ ಕೆಂಪಗಾಗಿಸಿತ್ತು.... ಎಷ್ಟೋ ಸಾರಿ ನೌಕರಿ ಬಿಟ್ಟು ಓಡಿ ಹೋಗೊಣ ಎನಿಸಿದ್ದರೂ , ಸೂಕ್ತ ಸಂದರ್ಭಕ್ಕಾಗಿ ಕಾಯುತ್ತಿದ್ದೆ....

ಇದೇ ಸಮಯದಲ್ಲಿ ಗಾಂಧೀಜಿಯವರ ಗ್ರಾಮ ಯಾತ್ರೆ ನಮ್ಮ ಊರಿಗೆ ಬರುತ್ತಿದೆ ಎಂದು ನಮ್ಮ ಪೋಲಿಸ್ ವಲಯದಲ್ಲಿ ಮಾತು ನಡೆಯುತ್ತಿತ್ತು..... ಅದರ ಬಂದೋಬಸ್ತಿಗಾಗಿ ಹೆಚ್ಚಿನ ಪೋಲಿಸ್ ಬಲವನ್ನು ಬೇರೆ ಊರಿನಿಂದ ಕೂಡ ಕರೆಸಲಾಗಿತ್ತು.... ಬಾಪೂಜಿಯವರ ಬಂಧನದ ಮಾತೂ ನಡೆಯುತ್ತಿತ್ತು..... ಆದರೆ ಅವರ ಬಂಧಿಸಿದರೆ ಮುಂದೆ ನಡೆಯುವ ಸಂಭವನೀಯ ಗಲಭೆಗಳ ಬಗ್ಗೆ ಆಂಗ್ಲ ಅಧಿಕಾರಿಗಳ ಭಯ ಇದ್ದೇ ಇತ್ತು....... ಹೇಗಾದರೂ ಮಾಡಿ ಈ ಗಾಂಧಿ ಎಂಬ ಮಂತ್ರದಂಡವನ್ನು ಭಾರತೀಯರಿಂದ ದೂರವಿರಿಸಬೇಕೆಂಬುದು ಫರಂಗಿಗಳ ವಿಚಾರವಾಗಿತ್ತು...... ಈ ವಿಷಯವೆಲ್ಲಾ ಭಾರತೀಯ ಪೊಲಿಸರಿಂದ ನಮಗೆಲ್ಲಾ ತಿಳಿಯುತ್ತಿತ್ತು..... ಈ ಸಾರಿ ಬರುವ ಗಾಂಧೀಜಿಯವರ ನಮ್ಮೂರ ಭೇಟಿ ಆಂಗ್ಲರನ್ನು ಬೆಚ್ಚಿ ಬೀಳಿಸಿದ್ದಷ್ಟೇ ಅಲ್ಲದೇ ನಮ್ಮೂರ ತೀವ್ರವಾದಿಗಳನ್ನೂ ಇಕ್ಕಟ್ಟಿಗೆ ಸಿಲುಕಿಸಿತ್ತು... ನಮ್ಮೂರ ತೀವ್ರವಾದಿಗಳ ಗುಂಪಿಗೆ ಬಾಪೂಜಿಯ ಅಹಿಂಸಾ ಚಳುವಳಿ ರುಚಿಸಿರಲಿಲ್ಲ..... ಆಂಗ್ಲರ ಹಿಂಸೆಗೆ ಹಿಂಸೆಯಿಂದಲೇ ಉತ್ತರ ಕೊಡಬೇಕು..... ಅವರನ್ನು ಭಾರತದಿಂದಲೇ ಓಡಿಸಬೇಕೆಂಬುದು ಅವರ ವಾದವಾಗಿತ್ತು..... ಇದಕ್ಕೆ ಭೋಸರು, ಸಾವರ್ಕರ ರ ಸಹಾಯ, ಮಾರ್ಗದರ್ಶನವೂ ದೊರೆತಿತ್ತು.... ಇಂಥಾ ಸಮಯದಲ್ಲಿ ಬಾಪೂಜಿಯ ಭೇಟಿ ತೀವ್ರವಾದಿಗಳ ಎಲ್ಲಾ ತಂತ್ರಗಳನ್ನು ಬುಡಮೇಲು ಮಾಡಿತ್ತು....... ಅವರು ಪ್ರತಿತಂತ್ರ ಹೂಡುತ್ತಿದ್ದರು..... ಇದರ ಸುಳಿವು ಆಂಗ್ಲ ಅಧಿಕಾರಿಗಳಿಗೂ ಸಿಕ್ಕಿತ್ತು...... ಇದರ ಲಾಭ ಪಡೆಯಲು ಫರಂಗಿಗಳು ಉಪಾಯ ಹೂಡಿದ್ದರು......

ಆ ದಿನ ನನಗಿನ್ನೂ ಸರಿಯಾಗಿ ನೆನಪಿದೆ....ನಾನು ಎಂದಿನಂತೆ ಕೆಲಸದ ಮೇಲೆ ಮೇಲಧಿಕಾರಿಗಳ ಕೊಠಡಿ ಕಡೆ ಹೊರಟಿದ್ದೆ...... ಅಂದು ಮೈಸೂರು ಪ್ರಾಂತ್ಯದ ಮುಖ್ಯ ಅಧಿಕಾರಿ ಬಂದಿದ್ದ ಸುದ್ದಿ ನನಗೂ ತಿಳಿದಿತ್ತು...... ಮೇಲಧಿಕಾರಿಯ ಕೊಠಡಿಯ ಬಾಗಿಲು ಸ್ವಲ್ಪವೇ ತೆರೆದಿತ್ತು..... ನಾನು ಒಳಗೆ ಹೋಗಲು ಬಾಗಿಲು ದೂಡುವವನಿದ್ದೆ..... ಒಳಗಿನಿಂದ " ಗಾಂಧೀಜಿ" ಎನ್ನುವ ಹೆಸರು ಕೇಳಿ ಬಂದ್ದಿದ್ದರಿಂದ ಅಲ್ಲೇ ನಿಂತೆ...... ಒಳಗಿನಿಂದ ನಮ್ಮ ಮುಖ್ಯ ಅಧಿಕಾರಿಯ ಮಾತು ಕೇಳಿ ಬರುತ್ತಿತ್ತು.... " ಈ ಸಾರಿ ಭಾರತೀಯ ಕುನ್ನಿಗಳಿಗೆ ಸರಿಯಾದ ಪಾಠ ಕಲಿಸಬೇಕು..... ಅವರ ಪ್ರಮುಖ ಅಸ್ತ್ರವಾದ ಗಾಂಧಿಯನ್ನು ಈ ಸಾರಿ ಮುಗಿಸಿಬಿಡಬೇಕು....." " ಸರ್, ಹಾಗೆ ಮಾಡಿದರೆ, ಜನರು ದಂಗೆ ಏಳುತ್ತಾರೆ.....ನಮ್ಮ ಈ ಹೊಡೆತ ಅವರಿಗೆ ನಮ್ಮ ವಿರುದ್ದ ಇನ್ನೂ ರೊಚ್ಚಿಗೇಳಿಸಬಹುದು... ಅವರ ಕಿಚ್ಚು ಇನ್ನೂ ಹೆಚ್ಚಿ ನಮ್ಮ ಆಳ್ವಿಕೆಗೆ ಅಂತ್ಯ ಹಾಡಬಹುದು ಸರ್..." ಎಂದವರು ನನ್ನ ಮೇಲಧಿಕಾರಿ ಆಗಿದ್ದರು..... ನನಗೆ ಎನೋ ಕೆಡುಕು ಸಂಭವಿಸಲಿದೆ ಎನಿಸಲು ಶುರು ಆಗಿತ್ತು...... ನಾನು ಅಲ್ಲೇ ನಿಂತು ಉಳಿದ ಮಾತೂ ಕೇಳಿಸಿಕೊಳ್ಳಲು ತಯಾರಾದೆ...... ಮಾತು ಮುಂದುವರಿದಿತ್ತು...." ಹಾಗೇನೂ ಆಗಲ್ಲ.... ಅವರ ಹತ್ಯೆಯನ್ನು ತೀವ್ರವಾದಿಗಳ ತಲೆಗೆ ಕಟ್ಟೋಣ.. ಅವರ ಮತ್ತು ಗಾಂಧಿ ನಡುವಿನ ಭಿನ್ನಾಭಿಪ್ರಾಯವನ್ನು ನಾವು ಈ ರೀತಿ ಉಪಯೊಗಿಸಿಕೊಳ್ಳೋಣ.... ಯಾರಿಗೂ ಸಮಸ್ಯೆ ಇರೋದಿಲ್ಲ.... ಆಗ ಭಾರತೀಯರು ತಮ್ಮ ತಮ್ಮಲ್ಲೇ ಹೊಡೆದಾಡಿ ಸಾಯುತ್ತಾರೆ...... ನಾವು ಇನ್ನೂ ನೂರು ವರುಷ ಇಲ್ಲೇ ಆಳ್ವಿಕೆ ಮಾಡಬಹುದು... ಇದೇ ನಮ್ಮ ಇಂಗ್ಲಂಡಿನ ಆದೇಶವೂ ಆಗಿದೆ" ಮುಖ್ಹ್ಯ ಅಧಿಕಾರಿ ಮಾತನಾಡುತ್ತಲೇ ಇದ್ದ......... ನನ್ನ ಜೀವ ಝಲ್ ಎಂದಿತು...... ಇದೇನಾದರು ನಡೆದರೆ ಭಾರತ ಎಂದಿಗೂ ಸ್ವತಂತ್ರ ದೇಶವಾಗೋದೇ ಇಲ್ಲ.....  ಇಲ್ಲ.... ಇವರ ಈ ಉದ್ದೇಶ ಈಡೇರಲು ಬಿಡಬಾರದು.... ಬಾಪೂಜಿ ಇಲ್ಲದ ದೇಶ, ಚಳುವಳಿ ಸಾದ್ಯವೇ ಇಲ್ಲ.... ನನ್ನ ದೇಶಭಕ್ತ ಮನಸ್ಸು ಜಾಗ್ರತವಾಗಿತ್ತು.....

ನಿಧಾನವಾಗಿ ಒಳ ನಡೆದೆ........ ಅಧಿಕಾರಿಯ ಮೇಜಿನ ಮೇಲಿನ
ಬಂದೂಕು ನನ್ನ ಕೈ ಸೇರಿತ್ತು..... ಹಿಂದು ಮುಂದು ಯೊಚನೆ ಮಾಡದೇ ಸೀದಾ ಒಳಗೆ ಹೋಗಿ, ಮುಖ್ಯ ಅಧಿಕಾರಿ , ಮೇಲಧಿಕಾರಿ ಇಬ್ಬರನ್ನೂ ಗುಂಡಿಕ್ಕಿ ಕೊಂದು ಹಾಕಿದೆ..... ಢಂ...... ಢಮ್....... ಢಂ...... ಬಂದೂಕಿನಲ್ಲಿದ್ದ ಎಲ್ಲಾ ಗುಂಡುಗಳನ್ನೂ ಅವರ ದೇಹಕ್ಕೆ ಹೊಡೆದೆ....... ಅಷ್ಟರಲ್ಲಿ ಬಂದ ನನ್ನ ಪೋಲಿಸ್ ಸಹೋದ್ಯೋಗಿಗಳು ನನ್ನ ಸೆರೆ ಹಿಡಿದರು........ ಅವರಿಗೆ ನಾನು ಎನೂ ಹೇಳುವ ಹಾಗಿರಲಿಲ್ಲ...... ಕೆಳಕ್ಕೆ ಬಿದ್ದಿದ್ದ ನನ್ನ ಮುಖ್ಯ  ಅಧಿಕಾರಿ ಇಲ್ಲೂ ಆಟ ಆಡಿದ್ದ.... ನನ್ನ ಸೆರೆ ಹಿಡಿದಿದ್ದ ಪೋಲಿಸರಿಗೆ " ಇವನನ್ನು ಬಿಡಬೇಡಿ, ಇವನು ಗಾಂಧೀಜಿಯವರನ್ನು ಕೊಲ್ಲುವ ಯೋಜನೆ ಹಾಕಿದ್ದಾನೆ" ಎನ್ನುತ್ತಲೇ ಸತ್ತು ಹೋದ......ಅವನ ಮಾತನ್ನು ಎಲ್ಲರೂ ನಂಬಿದರು..... ನನ್ನ ಮಾತನ್ನು ಯಾರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.... ನನ್ನ ಉದ್ದೇಶ ಬಾಫೂಜಿಯವರನ್ನು ಉಳಿಸುವುದಾಗಿತ್ತು...... ಆ ಉದ್ದೇಶದಲ್ಲಿ ನಾನು ಯಶಸ್ವಿಯಾಗಿದ್ದೆ......

ಬಾಪೂಜಿಯನ್ನು ಕೊಲ್ಲುವ ಯೋಚನೆ ಮಾಡಿದ್ದ ಎನ್ನುವ ಕಾರಣದಿಂದ ನನ್ನನ್ನು ಯಾರೂ ಹತ್ತಿರ ಸೇರಿಸಲಿಲ್ಲ..... ನನ್ನ ಪರವಾಗಿ ಯಾರೂ ವಕಾಲತ್ತು ವಹಿಸಲಿಲ್ಲ..... ನಾನು ಜೈಲಿನಲ್ಲೆ ಕೊಳೆಯುತ್ತ ಹೋದೆ..... ಕೊನೆಗೂ ಬಾಪೂಜಿಯ ಪ್ರಯತ್ನದ ಫಲವಾಗಿ ಭಾರತಕ್ಕೆ ಸ್ವಾತಂತ್ಯ ದೊರೆಯಿತು..... ನಾನು ಜೈಲಿನಲ್ಲೇ ಕುಳಿತು ಸಿಹಿ ತಿಂದೆ...... ಈಗಲೂ ನನಗೆ ಸಿಹಿ ತಿಂಡಿ ತಂದು ಕೊಡುತ್ತಾರೆ..... ನಾನೂ ಎಲ್ಲರಷ್ಟೇ ಖುಶಿ ಪಡುತ್ತೇನೆ..... ನನಗೇ ಈಗಲೂ ತಿಳಿದಿಲ್ಲ .... ನಾನು ದೇಶಪ್ರೇಮಿಯೋ...... ದೇಶದ್ರೋಹಿಯೋ........

Aug 4, 2010

ಯಾರವರು........?

ಹಸಿರಂತೆ ಪ್ರೇಮ ಕಥೆಗಳು,
ಯಾರವರು ಬಣ್ಣ ಕೆಡಿಸುವವರು.....?
ಕನಸಿನ ಚಿತ್ರ ಬಿಡಿಸಲು ಹೇಳಿ,
ಯಾರವರು ಕುಂಚ ಕಸಿಯುವವರು....?

ಅಮರವಂತೆ ಪ್ರೇಮಿ ಮನಸು,
ಯಾರದು ಕಾರಣ ಹೇಳದೆ ಹೊರಟವರು...?
ಗಟ್ಟಿಯಂತೆ ಪ್ರೇಮಬಂಧ,
ಯಾರವರು ಜಾಣರಂತೆ ಜಾರಿಕೊಂಡವರು..?

ಬಚ್ಚಿಡುತ್ತಾರಂತೆ ಪ್ರೀತಿ ಎದೆಯಲಿ,
ಯಾರವರು ರೆಕ್ಕೆ ಬಿಚ್ಚಿ ಹಾರಿದವರು....?
ಬಿಚ್ಚಲಾರದಂತೆ ಮನದ ಅನುಭಂದ,
ಯಾರವರು ಬದುಕಿಗೆ ಕಿಚ್ಚಿಡುವವರು..?

ರಾಗವಂತೆ ಮಧುರ ಪ್ರೀತಿ,
ಯಾರವರು ತಂತಿ ಕಡಿಯುವವರು.....?
 ದಾರಿಯಂತೆ ಪ್ರೇಮ ಜ್ಯೋತಿ ,
ಯಾರವರು ದೀಪ ಆರಿಸಿದವರು...?