Aug 29, 2012

ಒಳ್ಳೆ ಕೆಲಸ.....!!!!


       

        ಏನಾದರೂ  ಪಾರ್ಸೆಲ್ ತೆಗೆದುಕೊಂಡು ಹೋಗೋಣ ಎಂದುಕೊಂಡು ಮನೆಗೆ ಹೋಗುವ ದಾರಿಯಲ್ಲಿದ್ದ ಬಾರ್ ಎಂಡ್ ರೆಸ್ಟೋರೆಂಟ್ ಬಳಿ ಗಾಡಿ ನಿಲ್ಲಿಸಿದೆ......ಪಾರ್ಸೆಲ್ ಗೆ ಒರ್ಡರ್ ಮಾಡಿ ಕೌಂಟರ್ ಬಳಿ ನಿಂತಿದ್ದೆ...... ಸುಮಾರು ಎಂಟು ಘಂಟೆಯಾಗಿತ್ತು...... ರೋಡ್ ಆ ಕಡೆಯಿಂದ ಒಬ್ಬ ಹುಡುಗ ಬರೀ ಕೈಯಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಅನುಕರಣೆ ಮಾಡುತ್ತಾ ಬರುತ್ತಿದ್ದ....... ಅಂಗಿ ಚಡ್ಡಿ ಎಲ್ಲಾ ಕೊಳೆಯಾಗಿತ್ತು..... ಪಕ್ಕದಲ್ಲೇ ಒಂದು ಬ್ರಿಡ್ಜ್ ಕೆಲಸ ನಡೆಯುತ್ತಿತ್ತು...... ಅಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಹುಡುಗ ಎನಿಸಿತು....... ಆತ ಸೀದಾ ಬಾರ್ ಎಂಡ್ ರೆಸ್ಟೋರೆಂಟ್ ಬಂದು ನನ್ನನ್ನೂ ಕ್ರಾಸ್ ಮಾಡಿ ಕೌಂಟರ್ ಹತ್ತಿರ ಹೋದ..... ಇವನ್ಯಾಕೆ ಇಲ್ಲಿ ಎನಿಸಿತು...... ಹುಡುಗ ಬಹಳ ಚೂಟಿಯಾಗಿದ್ದ..... ಸುಮಾರು ಹನ್ನೆರಡು ವರ್ಷ ಪ್ರಾಯ ಇರಬಹುದು...... ಕೌಂಟರ್ ನಲ್ಲಿ ಹಣ ಕೊಟ್ಟು ಇನ್ನೊಂದು ಕಡೆ ಹೋದ.... ನಾನು ಆತನನ್ನೇ ಗಮನಿಸುತ್ತಿದ್ದೆ...... ಆತ ಸೀದಾ ಮದ್ಯ ಮಾರುವ ಕೌಂಟರ್ ಗೆ ಹೋದ..... ನನಗೆ ಆಶ್ಚರ್ಯ ಆಯ್ತು..... 

        ಈ ಹುಡುಗ ಅಲ್ಯಾಕೆ ಹೋಗಿದ್ದಾನೆ..? ಮಕ್ಕಳು ಇತ್ತೀಚಿಗೆ ಕುಡಿಯಲು ಶುರು ಮಾಡಿದ್ದಾರೆ.... ಅದೇ ಚಟವಾಗಿ ಅವರ ಸಣ್ಣ ಕರಳನ್ನ ಸುಟ್ಟು ಹಾಕಿ , ಅವರ ಸಾವಿಗೆ ಕಾರಣವಾಗಿದೆ ಎಂದು ಪೇಪರ್ ನಲ್ಲಿ ಓದಿದ್ದೆ..... ಈ ಹುಡುಗನೂ ಕುಡಿಯುತ್ತಾನಾ..? ಕೂಲಿ ಕಾರ್ಮಿಕರಿಗೆ ತಮ್ಮ ಮಕ್ಕಳ ಮೇಲೆ ಗಮನ ಹರಿಸಲು ಸಾಧ್ಯವಾಗದೇ ಈ ರೀತಿ ಆಗುತ್ತಿದ್ದಾರಾ....?  ಈ ಹುಡುಗ ಶಾಲೆಗೆ ಹೋಗುತ್ತಿದ್ದಾನಾ...? ತಲೆ ತುಂಬಾ ಪ್ರಶ್ನೆಗಳೇ ತುಂಬಿದವು...... ಕೌಂಟರ್  ನಲ್ಲಿದ್ದ ಯುವಕ ಗ್ಲಾಸ್ ನಲ್ಲಿ ವಿಸ್ಕಿ ಸುರಿಯುತ್ತಿದ್ದ....... ಆ ಹುಡುಗ ಅದನ್ನ ಎತ್ತಿಕೊಂಡ..... ನನಗೆ ಇನ್ನೂ ಗಾಬರಿಯಾಯಿತು....ಕೌಂಟರ್ ನ ಯುವಕ ಒಂದು ಕಡೆ ಕೈ ತೋರಿಸಿದ.....
ಆ ಹುಡುಗ ಗ್ಲಾಸ್ ಎತ್ತಿಕೊಂಡು ಒಂದು ಟೇಬಲ್ ನಲ್ಲಿ ಕುಳಿತಿದ್ದ ವ್ಯಕ್ತಿಗೆ ಕೊಟ್ಟ..... ನನಗೆ ಸಮಾಧಾನ ಆಯ್ತು...... 

      ಆ ಹುಡುಗ ಮತ್ತೆ ಕೌಂಟರ್ ಕಡೆ ಬಂದ...  ನನಗೆ ಮತ್ತೆ ತಲೆಬಿಸಿ ಶುರುವಾಯ್ತು.... ಮತ್ತೆ ಯಾಕೆ ಅಲ್ಲಿಗೆ ಹೋಗುತ್ತಿದ್ದಾನೆ ಎನಿಸಿತು..... ಕೌಂಟರ್ ಯುವಕ ಒಂದು ವಿಸ್ಕಿ ಬಾಟಲನ್ನು ಪೇಪರ್ನಲ್ಲಿ ಸುತ್ತಿ ಆ ಹುಡುಗನ ಕೈಲಿ ಕೊಟ್ಟ....... ಆ ಹುಡುಗ ಮತ್ತದೇ ಬರಿಗೈಯಲ್ಲಿ ಬ್ಯಾಟಿಂಗ್ ಬೌಲಿಂಗ್ ಅನುಕರಣೆ ಮಾಡುತ್ತಾ ಹೊರಗೆ ಹೋದ...... ನನಗೆ ನಗು ಬಂತು.... ನನ್ನನ್ನು ನನ್ನ ಪ್ರಾಥಮಿಕ ಶಾಲೆಯ ನೆನಪು ತಂದಿತು.......

      ನಾನು ಮೂರನೇ ತರಗತಿ ಇದ್ದೆ ಅನಿಸತ್ತೆ..... ನನ್ನ ಜೊತೆ ಶಂಕ್ರ ಅಂತ ನನ್ನ ಕ್ಲಾಸ್ ಮೇಟ್ ಇದ್ದ...... ಎಲ್ಲಾ ಶಾಲೆಯಲ್ಲಿ ಇದ್ದೇ ಇರುವ ಫಟಿಂಗನಾಗಿದ್ದ...  ಆವಾಗೆಲ್ಲ ಮೂರನೇ ತರಗತಿಯಿಂದ ನಮಗೆಲ್ಲಾ  "ಒಳ್ಳೆಯ ಕೆಲಸದ ಪಟ್ಟಿ" ಅಂತ ಒಂದು ಪಟ್ಟಿ  ಇರುತ್ತಿತ್ತು..... ಅದರಲ್ಲಿ ದಿನಾಲೂ ನಾವು ಮಾಡಿದ (?????) ಒಂದು ಒಳ್ಳೆ ಕೆಲಸವನ್ನು ಬರೆಯಬೇಕಿತ್ತು.... ಮಾಡದೇ ಇದ್ದರೂ ಬರೆಯಬೇಕಿತ್ತು..... ಒಂದು ದಿನ ನಮ್ಮ ಟೀಚರ್ ಗೆಳೆಯ ಶಂಕ್ರ ಬರೆದ ಒಳ್ಳೆಯ ಕೆಲಸದ ಪಟ್ಟಿ ನೋಡುತ್ತಿದ್ದರು..... ಓದಿದವರೇ ಅದೇ ಪಟ್ಟಿಯಿಂದ ಅವನ ತಲೆಯ ಮೇಲೆ ಹೊಡೆದರು..... ಅವನು ತಲೆ ಉಜ್ಜಿಕೊಳ್ಳುತ್ತಾ " ಬರೆದದ್ದು ತಪ್ಪಾಯಿತಾ ಸಾರ್? "ಎಂದ..... ಅವರು " ಅಪ್ಪನಿಗೆ ಬೀಡಿ ತಂದಿದ್ದು ಹೇಗೆ ಒಳ್ಳೆಯ ಕೆಲಸವಾಗುತ್ತದಾ ನಿನಗೆ.....?" ಎಂದರು.... ಅವನು...." ಒಳ್ಳೆಯ ಕೆಲಸ ಅಲ್ವಾ ಸಾರ್ ಅದು...?" ಎಂದ..... " ಬೇರೆ ಎನಾದರೂ ಬರೆ ಮಾರಾಯಾ....." ಎಂದರು ನಮ್ಮ ಸರ್..... ನನ್ನ ಪಟ್ಟಿ ತೆಗೆದುಕೊಂಡು ಓದಿದರು..... ನಾನು ಆ ದಿನ ’ ರಸ್ತೆಯ ಮೇಲೆ ಬಿದ್ದಿದ್ದ ಕಲ್ಲನ್ನು ಎತ್ತಿ ಚರಂಡಿದೆ ಎಸೆದೆನು’ ಎಂದು ಬರೆದಿದ್ದೆ..... ನನಗೂ ಬಿತ್ತು ಹೊಡೆತ..... " ಕಲ್ಲು ಎತ್ತಿ ಚರಂಡಿಗೆ ಎಸೆದರೆ ನೀರು ಹೋಗೋದು ಹ್ಯಾಗೆ.....?" ಎಂದರು..... ನಾನು ಬರೆದ ಸಾಲಿನ ಮೇಲೆ ಕೆಂಪು ಸಾಯಿಯಿಂದ ಗೆರೆ ಎಳೆದರು......

   ಇನ್ನೊಬ್ಬ ಹುಡುಗಿಯ ಹತ್ತಿರ ಹೋದರು..... ಅವಳ ಪಟ್ಟಿ ತೆಗೆದುಕೊಂಡು ಓದಿದರು..."ನೋಡು ಇವಳು ಸರಿ ಬರೆದಿದ್ದಾಳೆ.....’ ಅಮ್ಮನಿಗೆ ಹಾಲು ತಂದು ಕೊಟ್ಟೆನು.....’ ಸರಿಯಾಗಿ ಬರೆದಿದ್ದಾಳೆ..." ಎಂದರು..... ನಾನು ಮತ್ತು ಶಂಕ್ರ ಮುಖ ಮುಖ ನೋಡಿಕೊಂಡೆವು..... ಮಾಸ್ತರರು ಇನ್ನೂ ಮುಂದಕ್ಕೆ ಹೋದರು.... ನಮಗೆ ಗೊತ್ತಿತ್ತು ಮತ್ತೊಬ್ಬ ಎನು ಬರೆದಿದ್ದಾನೆ ಅಂತ.....

ಯಾಕೆಂದ್ರೆ..................
...........



 ಶಾಲೆ ಶುರುವಾಗುವ ಹತ್ತು ನಿಮಿಶದ ಮೊದಲಷ್ಟೇ ನಾವು ಒಳ್ಳೆಯ ಕೆಲಸದ ಪಟ್ಟಿ ಬರೆಯುತ್ತಿದ್ದುದು...ಒಳ್ಳೆಯ ಕೆಲಸವನ್ನು ಹಂಚಿಕೊಂಡು ಬರೆಯುತ್ತಿದ್ದೆವು.....ಒಬ್ಬರ ಹಾಗೆ ಇನ್ನೊಬ್ಬರು ಬರೆಯಬಾರದು ಎಂಬುದು ಶಂಕ್ರನ ಆದೇಶವಾಗಿತ್ತು..... ನಮ್ಮ ಒಳ್ಳೆಯ ಕೆಲಸವೆಲ್ಲ ಹೀಗೇ ಇರುತ್ತಿತ್ತು.....
" ಅಪ್ಪನಿಗೆ ಬೀಡಿ ತಂದು ಕೊಟ್ಟೆನು....."
"ಅಮ್ಮನಿಗೆ ಹಾಲು ತಂದು ಕೊಟ್ಟೆನು....."
"ಅಮ್ಮನಿಗೆ ಹೂವು ತಂದು ಕೊಟ್ಟೆನು....."
"ಅಪ್ಪನಿಗೆ ಬೀಡಿ ಹಚ್ಚಿಕೊಂಡು ತಂದು ಕೊಟ್ಟೆನು....."
"ಅಪ್ಪನಿಗೆ ಸಾರಾಯಿ ತಂದು ಕೊಟ್ಟೆನು....."
"ಅಪ್ಪ ಕುಡಿದ ಸಾರಾಯಿ ಲೋಟ ತೊಳೆದು ಇಟ್ಟೆನು....."
" ರಸ್ತೆಯ ಮೇಲಿದ್ದ ಕಲ್ಲನ್ನು ಚರಂಡಿಗೆ ಎಸೆದೆನು....."
ಪಟ್ಟಿ ತುಂಬಿದ ನಂತರ ಮತ್ತದೇ ಹಿಂದಿನ ಪಟ್ಟಿಯ ಒಳ್ಳೆಯ ಕೆಲಸ ಪುನ್ಃ ಬರೆಯುತ್ತಿದ್ದೆವು.....

      ಸರ್ ಇನ್ನೊಬ್ಬನ ಹತ್ತಿರ ಹೋಗಿ ಪಟ್ಟಿ ನೋಡಿ ಅವನ ತಲೆ ಮೇಲೆ ಹೊಡೆದರು...... ನಮ್ಮ ಶಂಕ್ರ ಸುಮ್ಮನಿರಬೇಕಲ್ಲ...ಕೇಳಿಯೇಬಿಟ್ಟ..... "ಸಾರ್.. ಅಮ್ಮನಿಗೆ ಹಾಲು ತಂದು ಕೊಡೋದು ಒಳ್ಳೆ ಕೆಲಸ ವಾದರೆ,ಅಪ್ಪನಿಗೆ  ಬೀಡಿ ತಂದು ಕೊಡೋದು ಹೇಗೆ ಕೆಟ್ಟ ಕೆಲಸ ಸಾರ್.....? ಎಂದ..... ನಮ್ಮ ಸರ್ ಗೆ ನಗು ಬಂತು.... ಅವರು ತುಂಬಾ ಒಳ್ಳೆಯ ಮಾಸ್ತರರಾಗಿದ್ದರು.....ತುಂಬಾ ಶಾಂತವಾಗಿ....." ಬೀಡಿ ಸೇಯೋದು ಕೆಟ್ಟ ಕೆಲಸ..... ಅದನ್ನು ತಂದು ಕೊಡೋದು ಸಹ ಕೆಟ್ಟ ಕೆಲಸವೇ...." ಎಂದರು..... ನಮ್ಮ ಶಂಕ್ರ ಸುಮ್ಮನಿರಬೇಕಲ್ಲ..... " ಅಲ್ಲ ಸಾರ್, ಮೊನ್ನೆ ನೀವೇ ಹೇಳಿದ್ರಿ..... ಅಪ್ಪ ಅಮ್ಮ ಎಂದರೆ ದೇವರ ಸಮಾನ..... ಅವರ ಸೇವೆ ಮಾಡಬೇಕು ಅಂತ..... ಈಗ ಅವರ ಸೇವೆ ಮಾಡಿದ್ರೂ ಕೆಟ್ಟ ಕೆಲಸ ಅಂತೀರಲ್ಲ ಸರ್....." ಎಂದ.... ನಾವೆಲ್ಲಾ ನಕ್ಕೆವು..... "ಹೇಯ್ ಸುಮ್ಮನಿರ್ರೋ ಎಲ್ರು..... " ಅಪ್ಪ ಕೆಟ್ಟ ಕೆಲ್ಸ ಮಾಡಿದ್ರೆ ..... ಅದು ಕೆಟ್ಟ ಕೆಲಸಾನೇ....." ಅಂದರು ನಮ್ಮ ಸರ್..... ಶಂಕ್ರ ಬಿಡಲೇ ಇಲ್ಲಾ..... " ಕೆಟ್ಟ ಕೆಲಸ ಮಾಡಿದ್ದು ಅಪ್ಪ ಆದ್ರೆ, ಅವರಿಗೇ ಹೇಳಿ ಸರ್..... ಮುಂದಿನ ಸಾರಿ ಮೀಟಿಂಗ್ ಗೆ ಬಂದಾಗ" ಎಂದ..... "ಸುಮ್ಮನೆ ಕುಳಿತುಕೊಳ್ಳೋ ಕತ್ತೆ" ಎಂದರು ಸರ್ ಸಿಟ್ಟಿನಲ್ಲಿ.....

      ಅದೆಲ್ಲಾ ನೆನಪಾಯಿತು ಈ ಹುಡುಗನ ಕೆಲಸ ನೋಡಿ..... ಈಗಲೂ " ಒಳ್ಳೆಯ ಕೆಲಸದ ಪಟ್ಟಿ" ಬರೆಯುವ ಪದ್ದತಿ ಇದ್ದರೆ ನಾಳೆನೂ ಈ ಹುಡುಗ ತನ್ನ ಪಟ್ಟಿಯಲ್ಲಿ " ಅಪ್ಪನಿಗೆ ಸಾರಾಯಿ ತಂದು ಕೊಟ್ಟೆನು" ಎಂದು ಬರೆಯುತ್ತಾನೆ ಎನಿಸಿಕೊಂಡೆ..... ನಗು ಬಂತು.... ನನ್ನ ಪಾರ್ಸೆಲ್ ಸಹ ಬಂತು....

Aug 15, 2012

ವಾಸ್ತವ........



ವೇದಿಕೆಯನ್ನು ಬಹಳ ಸುಂದರವಾಗಿ ಸಿಂಗರಿಸಿದ್ದೆ..... ನಾನೇ ಕಾಲೇಜಿನ ವಿಧ್ಯಾರ್ಥಿ ಮುಖ್ಯ ಕಾರ್ಯದರ್ಶಿಯಾಗಿದ್ದರಿಂದ ತುಂಬಾ ಮುತುವರ್ಜಿ ವಹಿಸಿ ಕಾರ್ಯಕ್ರಮ ಆಯೋಜಿಸಿದ್ದೆ...... ಇದೇ ನನ್ನ ಅಂತಿಮ ವರ್ಷದ ಎಮ್. ಬಿ.ಬಿ.ಎಸ್. ಆದುದರಿಂದಲೂ ಇರಬಹುದು...... ಒಬ್ಬರು ವಿಶೇಷ ವ್ಯಕ್ತಿಗೆ ಸನ್ಮಾನ ಇದೆಯೆಂದು ತಿಳಿದಿತ್ತು......ಆದರೆ ಆವ್ಯಕ್ತಿ ಯಾರೆಂದು ಗೊತ್ತಿರಲಿಲ್ಲ... 

ಸರಿಯಾಗಿ ಹತ್ತಕ್ಕೇ ಕಾರ್ಯಕ್ರಮ ಶುರು ಆಗುವುದಿತ್ತು....... ಎಲ್ಲಾ ಗಣ್ಯರೂ ವೇದಿಕೆ ಮೇಲೆ ಇದ್ದರು..... ನಮ್ಮ ಕಾಲೇಜಿನ ಪ್ರಿನ್ಸಿಪಾಲ್, ನಮ್ಮ ಊರಿನ  ಎಂ. ಎಲ್. ಎ, ಯುವ ವೇದಿಕೆಯ ಅಧ್ಯಕ್ಷರು, ನಮ್ಮೂರ ಹಿರಿಯರೂ ಆದ ಸ್ವಾತಂತ್ರ್ಯ ಹೋರಾಟಗಾರರು, ಅವರ ಪಕ್ಕದಲ್ಲಿ ಒಬ್ಬರು ಮಹಿಳೆ ಕುಳಿತಿದ್ದರು..... ತಲೆ ಮೇಲೆ ಸೆರಗು ಎಳೆದಿದ್ದರು.... ಕಿವಿಯಲ್ಲಿ ದೊಡ್ಡ ಜುಮುಕಿ ಇತ್ತು..... ಗಮನಿಸಿದಾಗ ಅವರು ಒಬ್ಬರು ಮುಸ್ಲಿಂ ಮಹಿಳೆ ಎಂದು ತಿಳಿದು ಬರುತ್ತಿತ್ತು..... ಅವರು ಯಾರು ನನಗೆ ತಿಳಿದಿರಲಿಲ್ಲ......  ನನ್ನ ಕೆಲಸ ವೇದಿಕೆ ವ್ಯವಸ್ಥೆಗೆ ಸೀಮಿತವಾಗಿದ್ದರಿಂದ ನಾನು ಎದುರಿನ ಸಾಲಲ್ಲೇ ಕುಳಿತಿದ್ದೆ...... ನಮ್ಮ ಪ್ರಿನ್ಸಿಪಾಲರು ಪ್ರಾಸ್ಥಾವಿಕ ಭಾಷಣ ಮಾಡಿ, ಬಂದ ಗಣ್ಯರನ್ನು ಸ್ವಾಗತಿಸಿದರು.....  ವೇದಿಕೆ ಮೇಲಿದ್ದ ಮಹಿಳೆ ಹೆಸರು ಅಲೀಮಾ ಎಂದು ಆಗಲೇ ತಿಳಿಯಿತು...... ಆದರೆ ಅವರನ್ನು ವೇದಿಕೆ ಮೇಲೆ ಯಾಕೆ ಕುಳ್ಳಿರಿಸಿದ್ದಾರೆ ಎಂದು ತಿಳಿಯಲಿಲ್ಲ..... ನಂತರ ಮಾತಾಡಿದ ನಮ್ಮೂರ ಎಮ್.ಎಲ್.ಎ ಸಾಹೇಬರು, ’ಕುಸಿಯುತ್ತಿರುವ ಮಾನವೀಯ ಮೌಲ್ಯಗಳ ಬಗ್ಗೆ ಹೇಳಿದರು..... " ಇಲ್ಲಿ ಕುಳಿತ ಮಹಿಳೆಗೆ ಎಲ್ಲರೂ ಎದ್ದು ನಿಂತು ಗೌರವಿಸಿ...... ಈ ಮಹಿಳೆ ಮಾಡಿದ ಹೋರಾಟ, ಯಾವ ಸ್ವಾತಂತ್ರ್ಯ ಹೋರಾಟಕ್ಕೂ ಕಮ್ಮಿ ಇಲ್ಲ...... ಈ ಮಹಿಳೆಯಿಂದಾಗಿ ಎಷ್ಟೋ ಜನರ ಪ್ರಾಣ ಉಳಿಯಿತು....... ತನ್ನ ಪ್ರಾಣದ ಬಗ್ಗೆ ಚಿಂತೆ ಮಾಡದೇ ಪರರ ಬಗ್ಗೆ ಯೋಚಿಸಿದ ಈ ಹೋರಾಟಗಾರ್ತಿಗೆ ಸಲ್ಲುವ ಎಲ್ಲಾ ಗೌರವಕ್ಕಾಗಿ ನಾನು ಸರಕಾರಕ್ಕೆ ಕೇಳಿಕೊಳ್ಳುತ್ತೇನೆ...... ನಾನು ಇವರಿಗೆ ಸನ್ಮಾನ ಮಾಡುವುದು ನನ್ನ ಪೂರ್ವಜನ್ಮದ ಪುಣ್ಯ...." ಎಂದರು...... ಹಣ್ಣು ಹಂಪಲ ಕೊಟ್ಟು ಶಾಲು ಹೊದೆಸಿ ಸನ್ಮಾನ ಮಾಡಿದರು............ನನಗೆ ಈಕೆಯ ಬಗ್ಗೆ ಇನ್ನೂ ಕುತೂಹಲ ಹೆಚ್ಚಿತು......

                  
ನಂತರ ಎದ್ದು ನಿಂತವರು ಆ ಮುಸ್ಲಿಂ ಮಹಿಳೆ.... ಸುಮಾರು ಮುವತ್ತೈದು ವರ್ಷವಿರಬಹುದು ಆಕೆಗೆ.......  ನನಗೆ ಆಕೆಯ ಬಗ್ಗೆ ಎನೂ ತಿಳಿದಿರಲಿಲ್ಲ...... ಇಡೀ ಸಭಾಂಗಣ ನಿಶ್ಯಬ್ಧವಾಗಿತ್ತು........ " ನಮಸ್ಕಾರ, ನನ್ನ ಹೆಸರು ಅಲೀಮಾ..... ನನಗೆ ಈ ವೇದಿಕೆಯ ಮೇಲೆ ಕುಳಿತುಕೊಳ್ಳಲು ಅರ್ಹತೆ ಇದೆಯೋ ಇಲ್ಲವೋ ತಿಳಿದಿಲ್ಲ.... ನಿಮ್ಮ ಪ್ರಿನ್ಸಿಪಾಲರು ಒತ್ತಾಯ ಮಾಡಿ ನನ್ನನ್ನು ಇಲ್ಲಿಗೆ ಕರೆಸಿದ್ದಾರೆ..... ನನ್ನ ಕಥೆಯನ್ನು ಹೇಳಲು ಕೇಳಿಕೊಂಡಿದ್ದಾರೆ..... ನಿಮಗೆಲ್ಲಾ ಬೋರ್ ಹೊಡೆಸದೇ ಬೇಗನೇ ಮುಗಿಸುತ್ತೇನೆ....
ನನ್ನದು ತುಂಬಾ ಸಾಮಾನ್ಯ ಕುಟುಂಬವಾಗಿತ್ತು..... ಅಪ್ಪ ಅಮ್ಮ ನೋಡಿದ ಹುಡುಗನನ್ನೇ ಮದುವೆಯಾಗಿದ್ದೆ..... ಆತ ಖಾಸಗಿ ಬಸ್ ಚಾಲಕನಾಗಿದ್ದ...... ಆತ ತರುವ ತಿಂಗಳ ಸಂಬಳವನ್ನೇ ನಂಬಿತ್ತು ನಮ್ಮ ಕುಟುಂಬ.... ನಾನು ಪಿ.ಯು.ಸಿ ಓದಿದ್ದೆನಾದ್ದರಿಂದ ಪಕ್ಕದಲ್ಲಿದ್ದ ಮಸೀದಿಗೆ ಹೋಗಿ ಬಡ ಮಕ್ಕಳಿಗೆ ಪಾಠ ಮಾಡುತ್ತಿದ್ದೆ...ಅದರಿಂದ ನನಗೆ ತಿಂಗಳಿಗೆ ಮುನ್ನೂರು ರುಪಾಯಿ ಸಿಗುತ್ತಿತ್ತು...... ಮದುವೆಯಾಗಿ ಹತ್ತು ವರ್ಷವಾದರೂ ಮಕ್ಕಳಿಲ್ಲದ ಕೊರಗೊಂದನ್ನು ಬಿಟ್ಟರೆ.... ಹಣವಿಲ್ಲದಿದ್ದರೂ ನೆಮ್ಮದಿಯಿಂದ ಇದ್ದೆವು...... ಅತ್ತೆ ಮಾವ ನನ್ನ ಗಂಡನಿಗೆ ಬೇರೆ ಮದುವೆ ಮಾಡಿಸಲು ಪ್ರಯತ್ನ ಪಟ್ಟರಾದರೂ ನನ್ನವರು ಅದನ್ನು ಒಪ್ಪಿರಲಿಲ್ಲ..... ನನ್ನ ಅಪ್ಪ ಅಮ್ಮ ಮುಂಬೈ ನ ಹಾಜಿ ಅಲಿ ದರ್ಗಾ ಕ್ಕೆ ಹೋಗಿ ಚಾದರ್ ಹೊದೆಸಿ ಬಂದರೆ ಮಕ್ಕಳಾಗುತ್ತದೆ ಎಂದಿದ್ದರು.... ನಾನು ಹೊರಡಲು ತಯಾರಿದ್ದೆ..... ಆದ್ರೆ ನನ್ನ ಗಂಡ ಮಾತ್ರ ನಮಾಜ್ ಮಾಡುವಾಗ " ನನಗೆ ಮಕ್ಕಳಾದರೆ ಮಾತ್ರ ಹಾಜಿ ಅಲಿಗೆ ಬಂದು ಚಾದರ್ ಹೊದೆಸುತ್ತೇನೆ" ಎಂದು ಹರಸಿಕೊಂಡರು....... ಯಾವ ದೇವರ ಹರಕೆಯ ಫಲವೋ.... ಮರುವರ್ಷವೇ ಮುದ್ದಾದ ಹೆಣ್ಣುಮಗುವಿಗೆ ತಾಯಿಯಾಗಿದ್ದೆ........ ಮಗುವಿಗೆ ಒಂದು ವರ್ಷವಾಗುತ್ತಲೇ , ಹಾಜಿ ಅಲಿಗೆ ಹೋಗಿ ಬರುವ ನಿರ್ಧಾರ ಮಾಡಿದೆವು.....


ನನಗಿನ್ನೂ ನೆನಪಿದೆ.... ರೈಲಿನಲ್ಲಿ ಒಂದು ರಾತ್ರಿ ಕುಳಿತು ಬೆಳ್ಳ್ಂ ಬೆಳಿಗ್ಗೆ ಮುಂಬೈ ತಲುಪಿದ್ದೆವು...  ರೈಲಿನಿಂದ ಇಳಿದು ಸೀದಾ "ಸುಲ್ತಾನ್ ಚಾದರ್ " ಅಂಗಡಿಗೆ ಹೋದೆವು....... ಅಲ್ಲಿ ಸುಂದರವಾದ ದರ್ಗಾಕ್ಕೆ ಕೊಡುವ ಚಾದರ್ ಸಿಗುತ್ತವೆ ಎಂದು ಕೇಳಿದ್ದೆ..... ಸಾವಿರ ರುಪಾಯಿ ಕೊಟ್ಟು ಚಾದರ್ ಕೊಂಡೆವು....... ಪುನ್ಃ ಇನ್ನೊಂದು ರೈಲು ಹಿಡಿಯಬೇಕಿತ್ತು....... ಮುಂಬೈ ನ ಚತ್ರಪತಿ ರೈಲು ನಿಲ್ದಾಣ ದಲ್ಲಿ ಕುಳಿತೆವು....... ನಿಲ್ದಾಣ ಗಿಜಿ ಗಿಜಿಗೊಡುತ್ತಿತ್ತು....... ಎಲ್ಲಿ ನೋಡಿದರಲ್ಲಿ ಜನ...... ಜನ ಓಡುತ್ತಿದ್ದಾರೋ.....ನಡೆಯುತ್ತಿದ್ದಾರೋ ತಿಳಿಯುತ್ತಿರಲಿಲ್ಲ....... ನಾನು , ನನ್ನ ಗಂಡ, ಮಗಳು ಒಂದು ಕಂಬದ ಪಕ್ಕ ಕುಳಿತೆವು....... ನನ್ನವರು ಹಾಜಿ ಅಲಿಗೆ ಹೋಗಲು ಯಾವ ರೈಲು ಮತ್ತೆ ಹೊರಡುವ ವೇಳೆ ಕೇಳಿ ಬರುತ್ತೇನೆ ಎಂದು ಹೊರಟರು........ ಹೋಗಿ ಸ್ವಲ್ಪ ಹೊತ್ತಿನಲ್ಲೇ ಓಡುತ್ತಾ ಬಂದರು....... ನನ್ನನ್ನೆಬ್ಬಿಸುತ್ತಾ ಮಗುವನ್ನು ಎತ್ತಿಕೊಂಡರು......ನಾನು " ಯಾಕೆ ....ಏನಾಯ್ತು.... ಎಷ್ಟು ಹೊತ್ತಿಗೆ ರೈಲು.. " ಎಂದೆ......ಅವರು ಕೂಗುತ್ತಿದ್ದರು.." ಓಡು ಇಲ್ಲಿಂದ.... ಓಡು.... ಯಾರೋ ಭಯೋತ್ಪಾದಕರು ಗುಂಡು ಹಾರಿಸುತ್ತಿದ್ದಾರಂತೆ......  ಪಾಕಿಸ್ಥಾನದವರಂತೆ........ ತುಂಬಾ ಜನರನ್ನು ಸಾಯಿಸಿದ್ದಾರೆ.......  ನಾನು ತಪ್ಪಿಸಿಕೊಂಡು ಬಂದೆ....ನಡೆ....ಓಡು......ಅಲ್ಲಿ ಕುಳಿತುಕೊಳ್ಳೋಣಾ......." ನನಗೆ ತೋಚದಾಗಿತ್ತು....... ಮಗುವನ್ನು ಅವರೇ ಎತ್ತಿಕೊಂಡಿದ್ದರು...... ನಾವು ಓಡುತ್ತಾ ಒಂದು ಕಂಬದ ಹಿಂದೆ ನಿಂತೆವು....ಗುಂಡಿನ ಸದ್ದು ಹತ್ತಿರವಾಗುತ್ತಿತ್ತು....... ಜನರ ಕೂಗಾಟವೂ ಮೇರೆ ಮೀರಿತ್ತು...... ನನ್ನ ಗಂಡ ಮಗುವನ್ನು ನನ್ನ ಕೈಗಿತ್ತರು........ ನನ್ನನ್ನು ಬಿಗಿದಪ್ಪಿ ಹಿಡಿದರು....... ನಾನು ಕಣ್ಣು ಮುಚ್ಚಿದೆ.......

    ನಾವು ಕುಳಿತಿದ್ದ ಕಂಬದ ಹಿಂದೆ ನಿಂತೇ ಆ ಭಯೋತ್ಪಾದಕ ಗುಂಡು ಹಾರಿಸುತ್ತಿದ್ದ........ ನನ್ನ ಗಂಡ ಎದ್ದು ನಿಂತರು...... ನಾನು ಕಣ್ಣು ಬಿಟ್ಟೆ....... ಆ ಭಯೋತ್ಪಾದಕ ಇಷ್ಟ ಬಂದ ಹಾಗೆ ಗುಂಡು ಹಾರಿಸುತ್ತಿದ್ದ....... ಪುಸ್ತಕದಲ್ಲಿ ರಣರಂಗದ ಬಗ್ಗೆ ಕೇಳಿದ್ದೆ...ಈಗ ಕಣ್ಣೆದುರಿಗೇ ಇತ್ತು...... ಆ ಭಯೋತ್ಪಾದಕ " ಅಲ್ಲಾ ಹೋ ಅಕ್ಬರ್" ಎಂದು ಕೂಗುತ್ತಿದ್ದ...... ಕಂಡಕಂಡಲ್ಲಿ ಗುಂಡು ಹಾರಿಸುತ್ತಿದ್ದ.....ಆತನ ಮುಖದಲ್ಲಿ ಮಾನವೀಯತೆ ಒಂಚೂರು ಕಾಣಿಸುತ್ತಿರಲಿಲ್ಲ...... ಮಕ್ಕಳು, ಮಹಿಳೆ, ವ್ರದ್ಧರು ಯಾರನ್ನೂ ನೋಡುತ್ತಿರಲಿಲ್ಲ ಆತ...... ದೂರದಲ್ಲಿ ಕೆಲ ಪೋಲಿಸರು ಕಂಬದ ಮರೆಯಲ್ಲಿ ಅಡಗಿದ್ದರು.....ಅವರ ಕೈಲಿ ಬರೇ ಲಾಠಿಯಿತ್ತು....ಪಾಪ ಅವರಾದರೂ ಏನು ಮಾಡುತ್ತಿದ್ದರು........ ಸುಮಾರಾಗಿ ಎಲ್ಲಾ ಸತ್ತ ನಂತರ ಆತ ಕಂಬದ ಹಿಂದಿದ್ದ ನಮ್ಮನ್ನು ನೋಡಿದ....... ಅದರಲ್ಲೂ ನನ್ನ ಗಂಡ ಎದ್ದು ನಿಂತಿದ್ದರು...... ಆ ಭಯೋತ್ಪಾದಕ ನನ್ನ ಗಂಡನ ಕಡೆ ಬಂದೂಕು ಹಿಡಿದ..... ನನ್ನವರು ಕೂಗಿದರು....." ಬಿಟ್ಟು ಬಿಡು ನಮ್ಮನ್ನು....ನಾವು ಇಲ್ಲಿಯವರಲ್ಲ...ದೂರದಿಂದ ಬಂದಿದ್ದೇವೆ..... ಬಿಟ್ಟುಬಿಡು ನಮ್ಮನ್ನು....ನನ್ನ ಮಗಳ ಹರಕೆ ತೀರಿಸಲು ಬಂದಿದ್ದೇವೆ ಇಲ್ಲಿಗೆ....... " ಆತನ ಮುಖ ಚರ್ಯೆ ಬದಲಾಗಲಿಲ್ಲ.....ಆತ ಬಂದೂಕು ಹಿಡಿದು ಇನ್ನೂ ಮುಂದೆ ಬಂದ..... ನನ್ನವರು ಕೊನೆಯ ಪ್ರಯತ್ನವಾಗಿ..." ನಾನೂ ಮುಸ್ಲಿಂ......ಹಾಜಿ ಅಲಿಗೆ ಬಂದಿದ್ದೆವು....... ನೋಡು ಚಾದರ್ ತಂದಿದ್ದೇವೆ....." ಎನ್ನುತ್ತಾ ತಂದಿದ್ದ ಚಾದರ್ ತೋರಿಸಿದರು....... 

ಊರಿನಲ್ಲಿ ಎಲ್ಲರ ಜೊತೆ ಗಣೇಶೋತ್ಸವ ಆಚರಿಸುವ ನನ್ನ ಗಂಡ , ಜೀವ ಉಳಿಸಿಕೊಳ್ಳಲು ತಮ್ಮ ಧರ್ಮವನ್ನು ಗುರಾಣಿಯಾಗಿ ಉಪಯೋಗಿಸಲು ನೋಡಿದ್ದರು....ಆದರೆ ಆ ಭಯೋತ್ಪಾದಕನಿಗೆ ಜಾತಿಯಿರಲಿಲ್ಲ, ಧರ್ಮವಿರಲಿಲ್ಲ..... ಕನಿಷ್ಟ ಆತನ ಮುಖಚರ್ಯೆಯೂ ಬದಲಾಗಲಿಲ್ಲ.......  ಆತ ದಿಡಿರನೇ ಗುಂಡು ಹಾರಿಸಿದ.... ಗುಂಡು ಬಡಿದ ರಭಸಕ್ಕೆ ನನ್ನ ಗಂಡ ಮಾರು ದೂರಕ್ಕೆ ಹಾರಿ ಬಿದ್ದರು...... ಅವರ ಕೈಯಲ್ಲಿದ್ದ ಚಾದರ್ ನನ್ನ ಮೈ ಮೇಲೆ ಬಿತ್ತು....... ನನ್ನ ಗಂಡನ  ಮೈ ಪೂರಾ ರಕ್ತವಾಗಿತ್ತು...... ಕಣ್ಣು ಅರ್ಧ ತೆರೆದಿತ್ತು..... ಬಿದ್ದ ರೀತಿ ನೋಡಿದರೆ ಆಗಲೇ ಪ್ರಾಣ ಹೋಗಿತ್ತು....... ನನ್ನ ಮುಖದ ಮೇಲೂ ರಕ್ತ ಬಿದ್ದಿತ್ತು...... ಆ ಭಯೋತ್ಪಾದಕ ಬಂದೂಕನ್ನ ನನ್ನ ಕಡೆ ತಿರುಗಿಸಿದ...... ನಾನು ಎಚ್ಚೆತ್ತುಕೊಳ್ಳುವ ಮೊದಲೇ ಗುಂಡು ಹಾರಿಸಿಯೇ ಬಿಟ್ಟ... ಅದು ನನ್ನ ಮಗುವಿನ ಕಣ್ಣಿಗೇ ತಾಗಿತು...... ನನ್ನ ಮಗಳ ಕೂಗು ಇನ್ನೂ ಕಿವಿಯಲ್ಲಿದೆ ನನಗೆ...... ನನಗೆ ಏನೆನಿಸಿತೋ ಗೊತ್ತಿಲ್ಲ.....ಕೈಯಲ್ಲಿದ್ದ ದರ್ಗಾಗೆ ಕೊಡಲು ತಂದಿದ್ದ ಚಾದರದಿಂದ ಬೀಸಿ ಒಗೆದೆ "ಅಲ್ಲಾ ಹೋ ಅಕ್ಬರ್" ಎನ್ನುತ್ತಾ ಆತನ ಕಡೆಗೆ........ ಅದು ಬಿಡಿಸಿಕೊಳ್ಳುತ್ತಾ ಹೋಗಿ ಆತನ ಮುಖದ ಮೇಲೆ ಬಿತ್ತು....... ತುಂಬಾ ಉದ್ದವಾದ ಚಾದರ್ ಆಗಿದ್ದರಿಂದ ಆತ ಅದನ್ನು ಬಿಡಿಸಿಕೊಳ್ಳಲು ಆತನಿಗೆ ಸ್ವಲ್ಪ ಸಮಯ ಹಿಡಿಯಿತು..........ಅಷ್ಟರಲ್ಲಿ ಅಲ್ಲಿದ್ದ ಕೆಲ ಪೋಲೀಸರು ಮತ್ತು ಜನ ಸೇರಿ ಆತನನ್ನು ಹಿಡಿದಿದ್ದರು...... 

ನನ್ನ ಮಗಳ ಅಳು ಹೆಚ್ಚುತ್ತಿತ್ತು.....ಕೂಡಲೇ ಬಂದ ಅಂಬುಲನ್ಸ್ ನನ್ನ ಮಗಳನ್ನ ಆಸ್ಪತ್ರೆಗೆ ಕರೆದುಕೊಂಡು ಹೋಯ್ತು....... ಆದರೆ ನನ್ನ ಗಂಡ ಮೇಲೇಳಲೇ ಇಲ್ಲ...... ನಂತರ ಸರಕಾರ ನನ್ನ ಮಗಳ ಉಪಚಾರ ಮತ್ತು ವಿಧ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದೆ...... ಅದಕ್ಕೆ ನಾನು ಆಭಾರಿಯಾಗಿದ್ದೇನೆ.....
ನಾನು ಇಲ್ಲಿ ಹೇಳಬೇಕಾದ ಒಂದೇ ಮಾತಿದೆ.....ಭಯೋತ್ಪಾದನೆಗೆ ಜಾತಿಯಿಲ್ಲ...ಮತವಿಲ್ಲ...... ಅವರಿಗೆ ಬುದ್ಧಿಯೂ ಇಲ್ಲ..... " ಆಕೆ ತನ್ನ ಕಣ್ಣನ್ನ ಸೆರಗಿನಿಂದ ಒರೆಸಿಕೊಳ್ಳುತ್ತಿದ್ದರು......

ನಮ್ಮೆಲ್ಲರ ಕಣ್ಣಲ್ಲೂ ನೀರಿತ್ತು....... ನಮ್ಮ ಕಾಲೇಜ್ ಪರವಾಗಿ ಹಿರಿಯ ಸ್ವಾತಂತ್ಯಗಾರರನ್ನೂ ಶಾಲು ಹೊದೆಸಿ ಸನ್ಮಾನಿಸಿದೆವು...... ಅಲೀಮಾ ಅವರ ಮಗಳು ಕಪ್ಪು ಕನ್ನಡಕ ಧರಿಸಿ ಚೂಟಿಯಾಗಿ ಓಡಾಡಿಕೊಂಡಿದ್ದಳು...... ನಾನು ಕಾರ್ಯಕ್ರಮದ ವಂದನಾರ್ಪಣೆ ಮಾಡಿದೆ....." ಅಲೀಮಾ ಮೇಡಂ ಮಾಡಿದ ಕೆಲಸ ಅವರಿಗೆ ತಿಳಿದೋ, ತಿಳಿಯದೆಯೋ ದೇಶಕ್ಕೆ ಒಳ್ಳೆಯದನ್ನೇ ಮಾಡಿದೆ...... ಹಾಜಿ ಅಲಿಗಾಗಿ ಕೊಂಡೊಯ್ದ ಚಾದರ್ ತುಂಬಾ ಜನರ ಪ್ರಾಣ ಉಳಿಸಿದೆ.... ಅದೂ ಸಹ ದೇವರ ಕೆಲಸವೇ ಆಗಿದೆ....... ನಿಮಗೆ ನಮ್ಮೆಲ್ಲರ ನಮನ......" ಎಂದೆ... ನನ್ನ ಕಣ್ಣು ಹನಿಗೂಡಿತ್ತು.....

ಕಾರ್ಯಕ್ರಮ ಮುಗಿಸಿ ಹೊರ ಬರುತ್ತಿದ್ದೆ......... ಆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಅಲೀಮಾ ಮೇಡಂ ರಸ್ತೆ ಬದಿಯಲ್ಲಿ ನಿಂತಿದ್ದರು...... ಅವರಿಗಾಗಿ ಕಾಲೇಜು ಮಂಡಳಿ ವಾಹನ ವ್ಯವಸ್ತೆ ಮಾಡಿತ್ತು.... ಅದು ಬರಲು ಸ್ವಲ್ಪ ಲೇಟ್ ಆಗಿತ್ತು ಅನಿಸತ್ತೆ........ ಎಮ್.ಎಲ್.ಎ ಸಾಹೇಬರ ವಾಹನ ಹೊರಡಲು ತಯಾರಾಗಿತ್ತು.... ನಾನು ಹೋಗಿ ಎಮ್.ಎಲ್.ಎ. ಆಪ್ತ ಕಾರ್ಯದರ್ಶಿ ಹತ್ತಿರ ಆ ಇಬ್ಬರನ್ನು ಅವರ ವಾಹನದಲ್ಲಿ ಕರೆದುಕೊಂಡು ಹೋಗಲು ವಿನಂತಿ ಮಾಡಿದೆ...... ಆತ ಹೋಗಿ ಎಮ್.ಎಲ್.ಎ. ಸಾಹೇಬರಿಗೆ ಹಾಗೆ ಹೇಳಿದ..... ನಾನು ಅವರಿಂದ ಸ್ವಲ್ಪವೇ ದೂರವಿದ್ದೆ...... ಅವರ ಮಾತು ನನ್ನ ಕಿವಿಗೆ ಕಾದ ಸೀಸದಂತೆ ಸುರಿದಿತ್ತು..." ಅಲ್ಲಾರೀ...ಇವರೆಲ್ಲಾ ಏನು ಮಹಾನ್ ಕಾರ್ಯ ಮಾಡಿದ್ದಾರೆ ಎಂದು ಸನ್ಮಾನ ಮಾಡಬೇಕ್ರೀ.....?... ಈ ಸ್ವಾತಂತ್ರ್ಯ ಹೋರಾಟಗಾರನಿಗೆ ಆ ಸಮಯದಲ್ಲಿ ಏನು ಮಾಡಿದ್ದನೋ ಯಾವನಿಗೆ ಗೊತ್ತು....... ಏನೂ ಕೆಲಸವಿಲ್ಲದೇ ಇದ್ದಾಗ ಸುಮ್ಮನೇ ದೊಂಬಿ ಜಗಳಕ್ಕೆ ಹೋಗಿದ್ದಿರಬೇಕು......ಜೈಲಿಗೆ ಹಾಕಿರುತ್ತಾರೆ...... ಅದು ಈಗ   ಸ್ವಾತಂತ್ರ್ಯ ಹೋರಾಟಗಾರ  ಎಂಬ ಹೆಸರು ಸಿಕ್ಕಿದೆ......ಈಗಿನ ಸರಕಾರದಿಂದ ಪಿಂಚಣಿಯನ್ನೂ ಪಡೆಯುತ್ತಿದ್ದಾನೆ....... ಆಯಮ್ಮನದೂ ಅದೇ ಕಥೆ....... ಸಾವು ತಮ್ಮ ಬುಡಕ್ಕೆ ಬಂದಾಗ ಎಲ್ಲರೂ ಬಡಿದೇಳುತ್ತಾರೆ.... ಅವಳೂ ಮಾಡಿದ್ದೂ ಅದೇ.... ಅದರಲ್ಲೇನು ಮಹಾ ಕೆಲಸವಿದೆ.......!!!"