Oct 22, 2010

ನನ್ನದೇನು ತಪ್ಪು....?

ಕೆಲಸ ಮಾಡಿ ಮಾಡಿ ಸುಸ್ತಾಗಿತ್ತು....  ತಿಂಗಳ ನಂತರ ಹೆಂಡತಿ ಮಕ್ಕಳನ್ನು ನೋಡಲು ಹೋಗುವವನಿದ್ದೆ ಈ ದಿನ.....  ಪೇಪರ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದೆ..... ತಿಂಗಳಿಗೊಮ್ಮೆ ರಜೆ ಸಿಗುತ್ತಿತ್ತು..... ಊರಿಗೆ ಹೋಗಲು ಹತ್ತು ಘಂಟೆ ಪ್ರಯಾಣ ಮಾಡಬೇಕಿತ್ತು..... ಕೆಲಸ ಬಿಡುವ ಸಮಯ ಆಗುತ್ತಲಿದ್ದರಿಂದ ಗಮನವೆಲ್ಲಾ ಗಡಿಯಾರದ ಮೇಲೆಯೆ ಇತ್ತು..... ಕೊನೆಗೂ ಸಮಯಕ್ಕೆ ಸರಿಯಾಗಿ ಬಿಟ್ಟಿದ್ದರಿಂದ ಓಡುತ್ತಾ ರೂಮಿಗೆ ಬಂದು ಊರಿಗೆ ಹೋಗಲು ಬೇಕಾದ ಸಾಮಾನೆಲ್ಲಾ ಬ್ಯಾಗ್ ಗೆ ಹಾಕಿದೆ...... ಮಗನಿಗೆ ತೆಗೆದುಕೊಂಡಿದ್ದ ಅಂಗಿಯನ್ನು ಮುದ್ದಿಸಿ ಚೀಲಕ್ಕೆ ಹಾಕಿದೆ..... ಹಿಂದಿನ ವಾರ ಪೇಟೆಗೆ ಹೊಗಿದ್ದಾಗ ತೆಗೆದುಕೊಂಡಿದ್ದ ಕಪ್ಪು ಬ್ಯಾಗ್ ತುಂಬಾ ಇಷ್ಟಪಟ್ಟು ಕೊಂಡಿದ್ದೆ...... ನನ್ನ ಹೆಂಡತಿಯ ಇಷ್ಟದ ಬಣ್ಣ ಅದು..... ಈ ಸಾರಿ ಬರುವಾಗ ಮಗನಿಗೆ ಸಣ್ಣದೊಂದು ಅಲಾರಾಂ ಇರುವ ಗಡಿಯಾರ ತರಲು ಹೇಳಿದ್ದಳು..... ಮಗನಿಗೆ ಬೆಳಿಗ್ಗೆ ಬೇಗನೆ ಎದ್ದು ಓದಲು ಅನುಕೂಲ ಆಗಲಿ ಎಂದು ಆಕೆಯ ಆಶೆಯಾಗಿತ್ತು..... ಚಿಕ್ಕದಾದ ಗಡಿಯಾರ  ಟಿಕ್ ಟಿಕ್ ಎಂದು ಸದ್ದು ಮಾಡುತ್ತಾ ಮುದ್ದಾಗಿತ್ತು.... " ಹೇಯ್ ರಷೀದ್.... ಟೈಮ್ ಆಗ್ತಾ ಇದೆ ಬಾರೋ..... ಬಸ್ ಸಿಗಲ್ಲ ಮತ್ತೆ..... " ಪಕ್ಕದ ರೂಮಿನಿಂದ ಗೆಳೆಯ ಕರೆಯುತ್ತಿದ್ದ...... ಮುಖ ತೊಳೆಯಲೂ ಹೋಗಲಿಲ್ಲ.... ಹಾಕಿಕೊಂಡಿದ್ದ ಅಂಗಿ ,ಪ್ಯಾಂಟ್ ಬದಲಾಯಿಸಲೂ ಹೋಗಲಿಲ್ಲ...... ಬ್ಯಾಗ್ ಹೆಗಲಿಗೆ ತೂಗುಹಾಕಿಕೊಂಡವನೇ ಗೆಳೆಯನ ರೂಮಿಗೆ ಓಡಿದೆ..... ಅವನ ರೂಮಿನಲ್ಲಿ ಟಿವಿಯಲ್ಲಿ ದೊಡ್ಡದಾದ ಸದ್ದಿನಲ್ಲಿ ಸುದ್ದಿ ಬರ್ತಾ ಇತ್ತು...... " ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ... ಹಲವರಿಗೆ ಗಾಯ..... ದುಷ್ಕರ್ಮಿಗಳಿಗಾಗಿ ಹುಡುಕಾಟ.." ಎಂದೆಲ್ಲಾ ಒದರುತ್ತಿತ್ತು ಟಿ.ವಿ...... ನಾನು ಒಂದು ಕ್ಷಣ ಗಾಬರಿಯಾದೆ..... ಒಂದು ಬಾಂಬ್ ಎಲ್ಲೇ  ಸ್ಫೊಟವಾದರೂ ಸಮಸ್ಯೆಯಾಗುವುದು ನಮ್ಮಂಥ ಪಾಪದವರಿಗೆ...... ಅದರಲ್ಲೂ ಬಡ ಜನರು, ದಿನಗೂಲಿ ಮಾಡುವವರಿಗೆ ಇದೊಂದು ದೊಡ್ಡ ಶಾಪವಾಗಿತ್ತು..... ಎಲ್ಲೇ ಬಾಂಬ್ ಬಿದ್ದರೂ ಅನುಮಾನ ಶುರುವಾಗೋದು ಮುಸ್ಲೀಮರ ಮೇಲೇ..... ಮೊದಲೆಲ್ಲಾ ದೂರದಲ್ಲಿ ಬಾಂಬ್ ಬೀಳುತ್ತಿತ್ತು, ಇಲ್ಲಿ ಅಷ್ಟೇನೂ ಪರಿಣಾಮ ಬೀರುತ್ತಿರಲಿಲ್ಲ... ಈಗ ಮಾತ್ರ ಬುಡಕ್ಕೇ ಬಿದ್ದಿತ್ತು ಬಾಂಬ್..... ಈಗ ಇಲ್ಲೆಲ್ಲಾ ಏನೇನ್ ಸಮಸ್ಯೆ ಆಗುವುದಿದೆಯೊ ಅನಿಸಿ ಭಯ ಶುರು ಆಗಿತ್ತು.... ಗೆಳೆಯ ಬಂದು ಕೈಹಿಡಿದು ಎಳೆದುಕೊಂಡು ಹೋಗಿರದಿದ್ದರೆ ನಾನು ಅಲ್ಲೇ ನಿಂತಿರುತ್ತಿದ್ದೆ.....

ಮನಸ್ಸು ಗೊಂದಲದ ಗೂಡಾಗಿತ್ತು..... ಯಾಕೆಲ್ಲಾ ಇದನ್ನೆಲ್ಲಾ ಮಾಡುತ್ತಾರೋ ಜನ..... ಇದನೆಲ್ಲಾ ಸಮರ್ಥನೆ ಮಾಡಿಕೊಳ್ಳುವ ಜನರೂ ಇದ್ದಾರೆ.... ಅವರವರ ಭಾವಕ್ಕೆ ತಕ್ಕ ಹಾಗೆ ಯೋಚನೆ ಮಾಡುತ್ತಾರೆ.... ಸಮಸ್ಯೆ ನಮ್ಮಂಥ ಜನ ಸಾಮಾನ್ಯರಿಗೆ.... ಸೂತ್ರಧಾರರು ಎಲ್ಲೋ ಕುಳಿತು ಇದನ್ನೆಲ್ಲಾ ಮಾಡಿಸುತ್ತಾರೆ.... ಅವರ ಸೂತ್ರಕ್ಕೆ ಕುಣಿಯುವ ಗೂಬೆಗಳು , ಅವರ ಆಮಿಷಕ್ಕೆ ಒಳಗಾಗಿ ಇದನ್ನೆಲ್ಲಾ ಮಾಡುತ್ತಾರೆ.... ಇವೆಲ್ಲದರ ನೇರ ಪರಿಣಾಮ ನಮ್ಮಂಥ ಬಡಪಾಯಿ ಮುಸಲ್ಮಾನರ ಮೇಲೆ ಆಗತ್ತೆ ಅನ್ನೋದು ಇದನ್ನೆಲ್ಲಾ ಮಾಡಿಸುವ ಖದೀಮರಿಗೆ ಅರ್ಥಾನೇ ಆಗಲ್ಲ..... ಹಿಂದಿನ ಸಾರಿ ದೆಹಲಿಯಲ್ಲಿ ಬಾಂಬ್ ಹಾಕಿದ್ದಾಗ ನನ್ನ ಕೆಲವು ಗೆಳೆಯರು ಮುಸ್ಲೀಂ ಎಂದು ಗೊತ್ತಾಗದಿರಲಿ ಅಂತ ಗಡ್ಡ ಬೋಳಿಸಿದ್ದರು..... ನಾನು ಮಾತ್ರ ಯಾವುದೊ ತಲೆ ಕೆಟ್ಟ ಜನರ ಮನೆಹಾಳ ಕೆಲಸಕ್ಕೆ ಹೆದರಿ ನಾನು ಗಡ್ಡ ಬೋಳಿಸಲು ತಯಾರಾಗಿರಲಿಲ್ಲ.....    ನಾನು ಮುಸ್ಲಿಂ ಎಂದು ಗೌರವ ಪಟ್ಟುಕೊಳ್ಳಲು ತುಂಬಾ ಜನ ಮಹಾತ್ಮರು ಒಳ್ಳೊಳ್ಳೆ ಕೆಲಸ ಮಾಡಿದ್ದಾರೆ... ನಾನು ಆ ಜನರ ಗುಂಪಿಗೆ ಸೇರಿದ್ದೇನೆಯೆ ಹೊರತು..... ಯಾರೋ ದೇಶದ್ರೋಹಿಗಳ ಮತಕ್ಕೆ ಸೇರಿದವನಲ್ಲ ಎಂದು ಸಾರಬೇಕಿತ್ತು..... ಕೈಯಿ ನನ್ನ ಎದೆಮಟ್ಟದ ಗಡ್ಡವನ್ನು ಸವರುತ್ತಿತ್ತು.... ಬೇಗ  ಬಸ್ ಬಂದು ಎಷ್ಟು ಬೇಗ ಊರು ಸೇರುತ್ತೇನೋ ಎನ್ನುವ ಹಾಗಾಗಿತ್ತು......

ಹಿಂದಿನ ಊರಿಂದ ಬರಬೇಕಿದ್ದ ಬಸ್ ಸ್ವಲ್ಪ ತಡವೇ ಆಗಿತ್ತು..... ಆಗೀಗ ಸೈರನ್ ಹಾಕಿಕೊಂಡು ಬರುವ ಪೋಲಿಸ್ ಜೀಪುಗಳು ನಡುಕ ಹುಟ್ಟಿಸುತ್ತಿದ್ದವು.... ತಪ್ಪೇ ಮಾಡದೇ ಇದ್ದರೂ ಯಾಕೆ ಹೆದರಿಕೆ ಎನ್ನುವ ಪ್ರಶ್ನೆಗೆ ಉತ್ತರ ದೊರೆಯುತ್ತಿರಲಿಲ್ಲ..... ಅಂಗಿ ಕೊಳಕಾಗಿತ್ತು.... ಪ್ಯಾಂಟ್ ಸಹ ಕೊಳಕಾಗಿತ್ತು...... ಮನೆಗೆ ಹೋಗುವ ಗಡಿಬಿಡಿಯಲ್ಲಿ ಎಲ್ಲವನ್ನೂ ಮರೆತು ಹಾಗೇ ಓಡಿ ಬಂದಿದ್ದೆ.... ಗೂಡಾ ಅಂಗಡಿಯವ ಚಾ ಕೊಡುವಾಗಲೂ ಒಂಥರಾ ಮುಖ ಮಾಡಿಕೊಂಡಿದ್ದ..... ನನ್ನ ಅಂಗಿ ಪ್ಯಾಂಟ್ ಕೊಳಕಾಗಿದ್ದನ್ನ ಮತ್ತೆ ನನ್ನ ಕೈಲಿದ್ದ ಕಪ್ಪು ಬ್ಯಾಗನ್ನ ನೋಡಿ ಆತ ನನ್ನ  ಬಗ್ಗೆ ತಪ್ಪು ತಿಳಿದಿರಬೇಕು ಎಂದುಕೊಂಡು ಸಮಾಧಾನ ಮಾಡಿಕೊಂಡೆ....  ತಡವಾಗಿ ಬಂದ ಬಸ್ನಲ್ಲಿ ಜನ ತುಂಬಿಹೋಗಿದ್ದರು...... ನಾನು ಅದರಲ್ಲೇ ತೂರಿಕೊಂಡು ಒಳಗೆ ಹೋದೆ.......

ನನ್ನಷ್ಟಕ್ಕೆ ಒಳಗೆ ಹೋದವನೇ ನನ್ನ ಬ್ಯಾಗ್ ಇಟ್ಟೆ...... ಎಲ್ಲರೂ ನನ್ನನ್ನೇ ನೋಡುತ್ತಿದ್ದರು..... ನನ್ನ ಗಡ್ಡವನ್ನೊಮ್ಮೆ, ನನ್ನ ಕಪ್ಪು ಬ್ಯಾಗನ್ನೊಮ್ಮೆ ದುರುಗುಟ್ಟಿ ನೋಡುತ್ತಿದ್ದರು...... ನಾನು ತಲೆ ತಗ್ಗಿಸಿ ನಿಂತೆ....... ಎಲ್ಲರ ಮುಖದಲ್ಲಿನ ದ್ವೇಷ, ಸಿಟ್ಟು ತಿರಸ್ಕಾರ ರಾಚುತ್ತಿತ್ತು.... ಅದರಲ್ಲಿ ಒಬ್ಬ " ಇಲ್ಲಿನ ಗಾಳಿ, ನೀರು ಬೇಕು.... ಉಳಿಯಲು ಜಾಗವೂ ಬೇಕು... ಆದ್ರೆ ನಿಷ್ಟೆ ಮಾತ್ರ ಪಾಕಿಸ್ತಾನಕ್ಕೆ ಯಾಕೆ...? " ಎನ್ನುತ್ತಿದ್ದ...... ನನ್ನ ಮನಸ್ಸಲ್ಲೂ ಇದೇ ಪ್ರಶ್ನೆ ಕಾಡುತ್ತಿತ್ತು...... ಆದರೆ ಉತ್ತರ ಯಾರಿಂದ ಪಡೆಯಲಿ ........?.. ಇನ್ನೊಬ್ಬ " ಯಾರನ್ನೂ ನಂಬುವ ಹಾಗಿಲ್ಲ..... ಉಣ್ಣುವ ಮನೆಗೆ ಬಾಂಬ್ ಹಾಕುವವರು ಎಲ್ಲಾ ಕಡೆ ಇದ್ದಾರೆ...." ಆತನ ಕಣ್ಣು ನನ್ನನ್ನೇ  ನೋಡುತ್ತಿತ್ತು..... ನನ್ನಲ್ಲಿ ಉತ್ತರ ಇರಲಿಲ್ಲ...... ಕಂಡಕ್ಟರ್ ಬಂದು ಟಿಕೇಟ್ ಕೇಳಿದ..... " ಭಟ್ಕಳಕ್ಕೆ ಒಂದು ಟಿಕೇಟ್ " ಎಂದೆ.....  ಆತ ನನ್ನನ್ನು ಮೇಲಿಂದ ಕೆಳಗಿನವರೆಗೂ  ನೋಡಿ ಟಿಕೇಟ್ ಕೊಟ್ಟ...... ಯಾರೋ ಫೋನಿನಲ್ಲಿ ಮಾತನಾಡುತ್ತಾ ಇದ್ದರು.." ಹೌದಾ...? ಇಬ್ಬರು ಸತ್ತರಂತಾ...? ಬೇರೆ ಕಡೆಯೂ ಬಾಂಬ್ ಹಾಕುವ ಸುದ್ದಿ ಇದೆಯಂತಾ...? ಈ ಮಕ್ಕಳನ್ನೆಲ್ಲಾ ಸುಟ್ಟುಬಿಡಬೇಕು...." ಎಂದೆಲ್ಲಾ ಅಬ್ಬರಿಸುತ್ತಿದ್ದ..... ಫೋನಿನಲ್ಲಿ ಮಾತು ಮುಗಿಸಿದವನೇ ಆತ " ಎಲ್ಲಾ ಕಡೆ ಬಾಂಬ್ ಹಾಕಬಹುದಂತೆ.... ಆ ಬ....ಮಕ್ಕಳ ಗ್ಯಾಂಗ್ ಎಲ್ಲಾ ಕಡೆ ಇದೆಯಂತೆ....ಜನರೆಲ್ಲಾ ಅನುಮಾನ ಬಂದಲ್ಲೆಲ್ಲಾ ಪೋಲಿಸರಿಗೆ ತಿಳಿಸಬೇಕಂತೆ.... ಈಗಾಗಲೇ ಬಾಂಬ್ ಎಲ್ಲಾ ಕಡೆ ಸಪ್ಲೈ ಆಗಿದೆಯಂತೆ.... ಇನ್ನು ಸ್ಫೋಟ ಆಗೊದೊಂದೇ ಬಾಕಿಯಂತೆ...." ಎಂದೆಲ್ಲಾ ಕೂಗುತ್ತಿದ್ದ...... ನನಗೆ ಮನೆಯಲ್ಲಿ ನನಗಾಗಿ ಕಾಯುತ್ತಿದ್ದ ಹೆಂಡತಿ ಮಕ್ಕಳ ನೆನಪಾಯಿತು.....


ಊಟದ ಸಲುವಾಗಿ ಡ್ರೈವರ್ ಬಸ್ಸನ್ನು ನಿಲ್ಲಿಸಿದ..... ನಾನು ದೊಡ್ಡದಾದ ಉಸಿರು ಬಿಟ್ಟು ಹೊರಗೆ ಬಂದೆ..... ಕೆಳಗೆ ಇಳಿಯುತ್ತಿದ್ದವರೆಲ್ಲಾ ನನ್ನ ಬ್ಯಾಗ್ ಕಡೆ ನೋಡುತ್ತಾ ಇಳಿಯುತ್ತಲಿದ್ದರು..... ನನಗೆ ಒಂದೂ ತಿಳಿಯುತ್ತಿರಲಿಲ್ಲ..... ಬೇಗನೇ ಊಟ ಮುಗಿಸಿ ಬಸ್ ಒಳಗೆ ಬಂದೆ..... ಅಲ್ಲಿ ಕುಳಿತವರೆಲ್ಲಾ ನನ್ನನ್ನು ನೋಡುತ್ತಲಿದ್ದರು.... ಕೆಲವರು ನನ್ನ ಬ್ಯಾಗ್ ಕಡೆ ನೋಡುತ್ತಾ ಮಾತನಾಡುತ್ತಿದ್ದರು...... ನಾನೂ ಗಮನವಿಟ್ಟು ಕೇಳಿದೆ.... ಟಿಕ್.... ಟಿಕ್.... ಟಿಕ್ ಎನ್ನುವ ಶಬ್ಧ ಬರುತ್ತಾ ಇತ್ತು...... ಎಲ್ಲಿಂದ ಅಂತ ಗೊತ್ತಿರಲಿಲ್ಲ....ಕೆಲವರು ಆಗಲೇ ಬಸ್ ಕೆಳಗಿಳಿಯಲು ಶುರು ಮಾಡಿದ್ದರು..... ನನಗೂ ಹೆದರಿಕೆ ಶುರು ಆಗಿತ್ತು.... ನನಗೆ ಗೊತ್ತಿಲ್ಲದೇ ಕೈಯಿ ನನ್ನ ಬ್ಯಾಗ್ ಎತ್ತಿಟ್ಟುಕೊಂಡಿತ್ತು.....  ಬ್ಯಾಗ್ ಎದೆಗವಚಿ ಇಟ್ಟುಕೊಂಡೆ...... ಹಿಂದೆ ಮುಂದೆ ಯೋಚಿಸದೇ ಕೆಳಗಿಳಿದು ಬಿಟ್ಟೆ.... ನಾನು ಕೆಳಗೆ ಇಳಿದದ್ದೇ ತಡ... ಎಲ್ಲರೂ ಬಸ್ ಹತ್ತಿದರು...... ನಾನು ಅರ್ಥವಾಗದೇ ಅಲ್ಲೇ ನಿಂತೆ..... ಟಿಕ್ ಟಿಕ್ ಶಬ್ಧ ನಿಂತಿರಲಿಲ್ಲ....... ಬಸ್ ಹೊರಟೇಬಿಟ್ಟಿತು...... ಟಿಕ್ ಟಿಕ್ ಶಬ್ಧ ಇನ್ನೂ ಹತ್ತಿರವಾದಂತಿತ್ತು....... ಆಗ ನೆನಪಾಯಿತು.... ಬ್ಯಾಗ್ನಲ್ಲಿದ್ದ ಮಗನಿಗಾಗಿ ಕೊಂಡ ಗಡಿಯಾರ......... ಬ್ಯಾಗ್ ಓಪನ್ ಮಾಡಿ ಹೊರ ತೆಗೆದೆ....... ಮಗನ ಮುದ್ದು ಮುಖ ನೆನಪಾಗಿ ಗಡಿಯಾರಕ್ಕೆ ಮುತ್ತು ಕೊಟ್ಟೆ..... ಯಾರೋ ಮಾಡಿದ ತಪ್ಪಿಗೆ ಯಾರನ್ನೋ ಅನುಮಾನದಿಂದ ನೋಡುವ ಜಗತ್ತಿನ ಬಗ್ಗೆ ಯೋಚಿಸಿ ನಗು ಬಂತು.....

ಬೆನ್ನ ಹಿಂದೆ ಪೋಲಿಸ್ ಸೈರನ್ ಹತ್ತಿರವಾಗುತ್ತಿತ್ತು.........