Sep 30, 2010

ಮನಸು ಹಗುರಾದ ಬಗೆ.....!

ಆಫೀಸಿನಲ್ಲಿ ತುಂಬಾ ಗಡಿಬಿಡಿಯಿತ್ತು..... ಕೆಲಸವಿತ್ತು ಕೂಡ..... ಘಳಿಗೆಗೊಮ್ಮೆ ರಿಂಗಣಿಸುವ ಫೋನಿನದೊಂದು ದೊಡ್ದ ಕಿರಿಕಿರಿಯಾಗಿತ್ತು..... ಫೋನ್ ತೆಗೆದು ಬಿಸಾಡಿಬಿಡೋಣ ಎನಿಸಿಬಿಟ್ಟಿತ್ತು......  ಮೊಬೈಲ್ ದೂರದಲ್ಲಿರಿಸಿ ಕುಳಿತಿದ್ದೆ..... " ಯಾವ ಮೋಹನ ಮುರಳಿ ಕರೆಯಿತೊ" ಎಂದು ನನ್ನ ಮೊಬೈಲ್ ಕರೆಯಲು ಶುರು ಮಾಡಿತು..... ಅಯ್ಯೋ... ಯಾರದಪ್ಪಾ ಇದು...? ನೋಡಿದೆ.... ಲೋಕಲ್ ನಂಬರ್ ಇತ್ತು...... ಬೇಗ ಏನಾದರೂ ಹೇಳಿ ಮುಗಿಸೋಣ ಎಂದುಕೊಂಡು " ಹೆಲೋ" ಎಂದೆ.... ಅತ್ತಲಿಂದ " ಹಲೊ...... ದಿನಕರ್ ಸರ್ ಅಲ್ರೀ..... ನಾನ್ರಿ... ಗೊತ್ತಾಯ್ತೇನ್ರೀ.....?"  ಆ ಧ್ವನಿ ಮರೆತಿರಲಿಲ್ಲ ನಾನು....
ಆರ್. ಎನ್. ಶೆಟ್ಟಿ ಕಂಪನಿ.........

ಮೊದಲ ಕೆಲಸ.......

ರಾತ್ರಿ ಪಾಳಿ......

ಫೋನ್........

ಆಕ್ಸಿಡೆಂಟ್.........

ಮಾಡದ ಸಹಾಯ.......

ಉಳಿದ ಪಾಪಪ್ರಜ್ನೆ........

ಎಲ್ಲಾ ನೆನಪಾಯಿತು......" ನಿನ್ನನ್ನು ಹೇಗೆ ಮರೆಯಲಿ..... ಹೇಗಿದ್ದೀಯಾ ಜಗದೀಶ್ " ಎಂದೆ...... ಅವನಿಗೆ ಶಾಕ್...... " ಸರ್ರ್..... ಹ್ಯಾಂಗ್ ನೆನಪಿಟ್ಟೀರ್ರೀ ನನ್ನ... ಇಷ್ಟ್ ವರ್ಷ್ ಆದ್ರೂ ನನ್ನ ಗುರ್ತ ಮಾಡೀರಲ್ರೀ ಸರ್ರ್..... ಎಲ್ಲಿದೀರ್ರೀ ಸರ್ರ್... ಹ್ಯಾಂಗ್ ಅದೀರ್ರೀ...ನಾನ್ ಇಲ್ಲೇ ಮಂಗ್ಳೂರ್ನಾಗೇ ಬಂದೀನ್ರೀ ಸರ್ರ್..... ನಿಮ್ಗ್ ಸಿಗ್ಬೇಕಿತ್ರೀ ...." ಅಂದ......... " ಯಪ್ಪಾ ಮಹಾರಾಯ... ನಿನ್ನನ್ನೂ ನಾನು ತುಂಬಾ ದಿನದಿಂದ ಹುಡುಕುತ್ತಾ ಇದ್ದೇನೆ...... ನೀನು ಎಲ್ಲೇ ಇರು ..... ಅಲ್ಲೇ ನಿಂತಿರು.... ಅರ್ಧ ಘಂಟೆಯಲ್ಲಿ ಅಲ್ಲಿರುತ್ತೇನೆ" ಎನ್ನುತ್ತಾ ಹೊರಗೋಡಿ ಬಂದೆ..... ಕಾರಿನಲ್ಲಿ ಕುಳಿತವನೆ " ನಡಿ.... ಪಂಪ್ವೆಲ್ ಸರ್ಕಲ್ ಕಡೆ.. ಅರ್ಜಂಟ್ " ಎಂದೆ..... ಕಾರು ಓಡುತ್ತಿತ್ತು ಪಂಪ್ ವೆಲ್ ಸರ್ಕಲ್ ಕಡೆ..... ನನ್ನ ನೆನಪು ಓಡುತ್ತಿತ್ತು ನನ್ನ ಭೂತಕಾಲದ ಕಡೆ......

 ನಾನು ಡಿಪ್ಲೋಮಾ ಮುಗಿಸಿದವನೇ ಕೆಲಸ ಸೇರಿದ್ದೆ..... ಆರ್. ಎನ್. ಶೆಟ್ಟಿಯವರ ಕಂಪನಿಯಲ್ಲಿ .....ಶರಾವತಿ ನದಿಗೆ ಗೇರುಸೊಪ್ಪದಲ್ಲಿ ಅಣೆಕಟ್ಟು ಕಟ್ಟುವ ಕೆಲಸ ಅದಾಗಿತ್ತು... ಹೊಸದಾಗಿ ಸೇರಿದ್ದರಿಂದ ನನ್ನನ್ನು ರಾತ್ರಿಪಾಳಿಯ ಕೆಲಸ ಕೊಟ್ಟಿದ್ದರು....... ಊಟ ಮುಗಿಸಿ, ರಾತ್ರಿ ೮ ಕ್ಕೆ ಹೊರಡಬೇಕಿತ್ತು.... ರಾತ್ರಿ ಹೆಚ್ಚಿಗೆ ಕೆಲಸವಿರದೇ ಇರುತ್ತಲಿದ್ದರಿಂದ ಒಂದು ಟಿಪ್ಪರ್ ಇಡುತ್ತಿದ್ದರು..... ಅದಕ್ಕೆ "ಸ್ಟ್ಯಾಂಡ್ ಬೈ" ಗಾಡಿ ಎಂದು ಕರೆಯುತ್ತಿದ್ದರು.... ಏನಾದರು ತುರ್ತು ಕೆಲಸಕ್ಕೆ ಅದನ್ನು ಉಪಯೋಗಿಸಬೇಕಿತ್ತು..... ಅದಕ್ಕೆ ಒಬ್ಬ ಚಾಲಕನೂ ಇರುತ್ತಿದ್ದ..... ನಾನು ಹೊಸಬನಾದ್ದರಿಂದ ಅವನನ್ನು ಮಾತನಾಡಿಸಲು ಹೋಗಲಿಲ್ಲ..... ನನಗೆ ಗೊತ್ತಿತ್ತು ನನ್ನ ಸಂಬಳಕ್ಕಿಂತ ಅವನ ಸಂಬಳವೇ ಹೆಚ್ಚು ಎಂದು.... ನನಗೆ ಸಂಬಳ ಆಗ ೧೮೦೦ ರುಪಾಯಿ ಆದ್ರೆ ಅವನದು ೩೩೦೦..... ಮೆಕ್ಯಾನಿಕಲ್ ಸ್ಟಾಫ್ ಗೆ ಸ್ವಲ್ಪ ಹಮ್ಮು ಇದೆ ಎಂದು ನನ್ನ ಸಂಗಡಿಗರು ಮಾತನಾಡಿಕೊಳ್ಳುತ್ತಿದ್ದುದನ್ನು ನಾನು ಕೇಳಿದ್ದೆ..... ಅದಕ್ಕೇ ನಾನು ನನ್ನ ಕೆಲಸದಲ್ಲಿ ತಲ್ಲೀನನಾಗಿದ್ದೆ..." ಕಂಪನಿಗೆ ಹೊಸಬರೆನ್ರಿ " ಎಂದಂತಾಗಿ ತಿರುಗಿದೆ.... ಒಬ್ಬ ಸಪೂರ ಹುಡುಗ ನಿಂತಿದ್ದ....." ಹೌದು.... ಒಂದು ವಾರ ಆಯ್ತು...." ಎಂದೆ.... ಆತ ಸಂಭಾವಿತನಂತೆ ಕಂಡ....ತನ್ನ ಹೆಸರನ್ನ ಜಗದೀಶ್ ಎಂದು ಆತ ಪರಿಚಯ ಮಾಡಿಕೊಂಡ....

"ಊಟ ಆತೇನ್ರೀ ಸರ್ರ್.... ನಾ ಎನಾರ ತರ್ಲೇನ್ರಿ ತಿನ್ನಾಕೆ..." ಎಂದ ಆತ.....ನಾನು ಬೇಡ ಎಂದೆ.... ನನಗೆ ತುರ್ತಾಗಿ ಮನೆಗೆ ಫೋನ್ ಮಾಡಬೇಕಿತ್ತು.... ಹೊಸದಾಗಿ ಮನೆಯಲ್ಲಿ ಫೋನ್ ತೆಗೆದುಕೊಂಡಿದ್ದರು.....  ಮನೆಗೆ ಫೋನ್ ಮಾಡಿ ಅಪ್ಪ ಅಮ್ಮನ ಜೊತೆ ಮಾತನಾಡಬೇಕಿತ್ತು..... ಫೋನ್ ಮಾಡಬೇಕೆಂದರೆ ಐದು ಕಿಲೋಮೀಟರ್ ಹೋಗಬೇಕಿತ್ತು......ಅದಕ್ಕೆ ಆತನನ್ನು ಕರೆದು....." ಜಗದೀಶ್, ಮನೆಗೆ ಫೋನ್ ಮಾಡಬೇಕಿತ್ತು..... ಹೋಗೋಣ್ವಾ..." ಎಂದೆ....." ಅದ್ಕ್ಯಾಕ್ರೀ ಹೀಗ್ ಕೇಳ್ತಿರೀ..... ನಮ್ ಕೆಲ್ಸಕ್ಕೇ ಇಟ್ಟಿದ್ದು ಈ ಗಾಡೀನ.....ನಡಿರ್ರಿ....." ಎಂದವನೇ ಗಾಡಿ ಸ್ಟಾರ್ಟ್ ಮಾಡಿಯೇ ಬಿಟ್ಟ.... ನಾನು ಸುಮ್ಮನೇ ಹೋಗಿ ಕುಳಿತೆ..... ಟಿಪ್ಪರ್ ಒಳ್ಳೆ ಜೀಪ್ ತರಹ ಓಡಿಸುತ್ತಿದ್ದ..... ನಾನು ಗಟ್ಟಿಯಾಗಿ ಕುಳಿತಿದ್ದೆ..... ಐದು ನಿಮಿಷದಲ್ಲಿ ಎಸ್. ಟಿ ಡಿ. ಬೂತ್ ಎದುರಿಗೆ ನಿಂತಿದ್ದೆವು..... ದೊಡ್ಡ ಕ್ಯೂ ಇತ್ತು ಬೂತ್ ಎದುರಿಗೆ..... ನಾನೂ ನಿಂತೆ ಕ್ಯೂನಲ್ಲಿ...... ನನ್ನ ಹಿಂದೆ ಆತನೂ ನಿಂತ.... ಅರ್ಧ ತಾಸಿನ ನಂತರ ನನ್ನ ಪಾಳಿ ಬಂತು..... ಮನೆಯವರೆಲ್ಲರ ಜೊತೆ ಮಾತನಾಡಿ ನಾನು ಹೊರ ಬಂದೆ..... ಆತನೂ ಎಲ್ಲಿಗೋ ಮಾತನಾಡಿ ಬಂದ.... ನಾನು ಮೊದಲೇ ಗಾಡಿಯಲ್ಲಿ ಹೋಗಿ ಕುಳಿತಿದ್ದೆ....... ಆತ ದೊಡ್ಡದಾಗಿ ಹಾಡು ಹೇಳುತ್ತಾ ಬಂದ...." ಹೊಗೊಣೇನ್ರೀ..... ಸರ್ರ...." ಎಂದವನೆ ಗಾಡಿ ಸ್ಟಾರ್ಟ್ ಮಾಡಿದ....  ಟಿಪ್ಪರ್ ಮುಂದೆ ಒಂದು ಸೈಕಲ್ ನಿಂತಿತ್ತು........ ಸೈಕಲ್ ಪಕ್ಕಕ್ಕಿಡಲು ನಾನು ಕೆಳಗಿಳಿಯಲು ಹೋಗುವವನಿದ್ದೆ.....    " ಹೇ ಬಿಡ್ರೀ ಸರ್ರ..... ನೀವ್ಯಾಕ್ ಇಳಿತೀರ್ರೀ.... ತಡೀರ್ರಿ...... ಹಿಂದಕ್ಕ್ ತಗಿತಿನಿ ಗಾಡೀನ......" ಎಂದವನೇ ರಿವರ್ಸ್ ಗೇರ್ ಹಾಕಿ ಹಿಂದಕ್ಕೆ ಹೋದ..........." " ದಡಾಲ್......... ಕಟ್......ಕಟ್......" " ಎಂದು ದೊಡ್ದದಾಗಿ ಸದ್ದಾಯಿತು......

ಎದೆ ಒಂದು ಸಲ ನಿಂತಂತಾಯಿತು...... ಯಾರಾದರು ನಿಂತಿದ್ದಿರಬಹುದಾ....? .... ಅವರ ಮೇಲೆ ಗಾಡಿ ಹೋಗಿರಬಹುದಾ....? ಅವರೇನಾದರು ಸತ್ತು ಹೋದರೆ...? ನಾನು ಇಷ್ಟು ದೂರ ಗಾಡಿ ತೆಗೆದುಕೊಂಡು ಬಂದಿದ್ದೆ ತಪ್ಪು..... ಯಾರಿಗಾದರೂ ಗೊತ್ತಾದರೆ ನನ್ನ ಕೆಲಸ ಹೋಗುತ್ತದೆ...... ಕೆಳಗೆ ಇಳಿಯಲು ಮನಸ್ಸೇ ಆಗಲಿಲ್ಲ..... ಆತ ಸಲೀಸಾಗಿ ಕೆಳಗಿಳಿದು ಹೋಗಿ ಬಂದು..." ಬಜಾಜ್ ಸ್ಕೂಟರ್ ಮ್ಯಾಲ ನಮ್ ಗಾಡಿ ಹತೈತ್ರೀ ಸರ್ರ...... ನೀವೇನೂ ಇಳಿಬ್ಯಾಡ್ರೀ.... ನಾನ್ ಮಾತಾಡ್ ಬರ್ತೀನ್ರೀ..." ಎಂದವನೇ ಮತ್ತೆ ಹಿಂದುಗಡೆ ಹೋದ..... ನಾನು ನನ್ನ ಕಿಸೆಗೆ ಕೈ ಹಾಕಿದೆ...... ಕಿಸೆಯಲ್ಲಿ ಐವತ್ತು ರುಪಾಯಿ ಇತ್ತು...... ರೂಮಿನಲ್ಲಿದ್ದ ಏಳು ನೂರಾ ಐವತ್ತು ರುಪಾಯಿ ನೆನಪಾಯಿತು......  ಎನೋ ದೊಡ್ದ ಸಿರಿವಂತನ ಹಾಗೆ ಕೆಳಗಿಳಿದು ಹೋದೆ.....ಸ್ಕೂಟರ್ ಮಾಲಿಕ ಜಗದೀಶನ ಜೊತೆ ಜಗಳವಾಡುತ್ತಿದ್ದ..... " ಅಲ್ರೀ... ಹೋಗಿ ಹೋಗಿ ಟಿಪ್ಪರ್ ಹಿಂದಕ್ಕ್ ಯಾರಾದ್ರೂ ಗಾಡಿ ನಿಲ್ಲಿಸ್ತಾರೇನ್ರೀ....? ನಿಮ್ಗೂ ತಲಿ ಐತೋ ಇಲ್ವೋ..." ಎಂದು ರೇಗುತ್ತಿದ್ದನಾದರೂ ಅವನ ದ್ವನಿಯಲ್ಲಿ ತನ್ನದೇ ತಪ್ಪಿದೆ ಎನ್ನುವ ಭಾವ ಇತ್ತು...... ನಾನು ಎನೂ ಮಾತನಾಡುತ್ತಿರಲಿಲ್ಲ..... ಯಾಕಂದ್ರೆ , ನನ್ನ ಹತ್ತಿರ ದುಡ್ಡೂ ಇರಲಿಲ್ಲ.... ನಮ್ಮದೇ ತಪ್ಪಿದೆ ಎನ್ನುವ ಅಭಿಪ್ರಾಯವು ನನ್ನದಿತ್ತು.....  ಹಾಗಾಗಿ ನಾನು ಸುಮ್ಮನಿದ್ದೆ......  " ನೀವ್ ಹೋಗ್ ಕುಂದರ್ರೀ ಸರ್ರ್..... ನಾ ಮಾತಾಡ್ ಬರ್ತೀನ್ರಿ. " ಎಂದ ಜಗದೀಶ.... ನಾನು ಸುಮ್ಮನೆ ಹೋದೆ....

ಸ್ವಲ್ಪ ಹೊತ್ತಿನಲ್ಲಿ ಬಂದು ಕುಳಿತ......ಟಿಪ್ಪರ್ ಸ್ಟಾರ್ಟ್ ಮಾಡಿದ..... ಮುಖ ಸ್ವಲ್ಪ ಗಂಭೀರವಾಗಿತ್ತು.... ನಾನು ಸ್ವಲ್ಪ ಅಳುಕುತ್ತಲೇ ಕೇಳಿದೆ.... " ಏನಾಯ್ತು...? "
" ಏನಿಲ್ರೀ ಸರ್ರ್....ಅವ್ನಿಗೆ ಹಣ ಕೊಡ್ತೀನಿ ಅಂದೀನ್ರಿ...... ಸುಮ್ನೆ ಹ್ವಾದ....." ನಾನು ಅಳುಕುತ್ತಲೇ " ಎಷ್ಟು....? " ಎಂದು ಕೇಳಿದೆ...... ಆತ " ನಾಲ್ಕು ಸಾವಿರ ಅಷ್ಟೇರಿ...." ಅಂದ ಎನೂ ಟೆನ್ಶನ್ ಇಲ್ಲದೇ...... ನನ್ನ ಉಸಿರು ನಿಂತಿತು..... ನನ್ನ ಗಣೀತ ಮೊದಲೇ ವೀಕ್...... ನಾಲಿಗೆ ಆಗಲೇ ನಾಲ್ಕು ಸಾವಿರವನ್ನು ನನ್ನ ತಿಂಗಳ ಸಂಬಳದಿಂದ ಬಾಗಿಸಲು ಶುರು   ಮಾಡಿತ್ತು..... ಹೇಗೆ ಬಾಗಿಸಿದರೂ ನನ್ನ ಎರಡು ತಿಂಗಳ ಸಂಬಳಕ್ಕಿಂತ ಹೆಚ್ಚು ಬೇಕಾಗಿತ್ತು..... ನನ್ನಲ್ಲಿ ಮಾತನಾಡಲು ಎನೂ ಇರಲಿಲ್ಲ...... ಮಾತನಾಡಿದರೆ ನಾನು ಹಣ ಹಂಚಿಕೆ ಮಾಡಿಕೊಳ್ಳಬೇಕಾಗಿ ಬರುತ್ತದೆ ಎನಿಸಿ ಸುಮ್ಮನೆ ಕುಳಿತೆ.... ಕಂಪನಿಯ ಜೊತೆ ಮಾತನಾಡಿ ಹಣ ಕೊಡಿಸೋಣ ಎಂದರೆ ಗಾಡಿ ಹೊರಗಡೆ ತಂದಿದ್ದೇ ತಪ್ಪಾಗಿತ್ತು.... ಹಣವಿರದೇ ನಾನು ಅಸಹಾಯಕನಾಗಿದ್ದೆ..... ಆತನಿಗೆ ಸಹಾಯ ಮಾಡದ ಪರಿಸ್ಥಿತಿಯಲ್ಲಿದ್ದೆ.....

ಜಗದೀಶ ಸ್ಕೂಟರ್ ರಿಪೇರಿ ಮಾಡಿಸಿ ತಂದು ಕೊಟ್ಟಿದ್ದಾನೆ ಎಂದು ಕೇಳಿ ತಿಳಿದಿದ್ದೆ..... ಆದ್ರೆ ಆತನಿಗೆ ಏನೂ ಸಹಾಯ ಮಾಡಲಾಗದೇ ಇದ್ದುದಕ್ಕೆ ನನಗೆ ಪಾಪಪ್ರಜ್ನೆ ನನ್ನನ್ನು ಕಾಡುತ್ತಿತ್ತು..... ನಂತರದ ದಿನಗಳಲ್ಲಿ ಆತ ನನ್ನ ಎದುರಿಗೆ ಬಂದರೂ ನನಗೆ ಮುಜುಗರವಾಗುತ್ತಿತ್ತು.... ಹಣ ಸಹಾಯ ಮಾಡೊಣವೆಂದರೂ ನನಗೆ ಆ ಸ್ಥಿತಿ ಇರಲಿಲ್ಲ...... ಸುಮಾರು ದಿನದ ನಂತರ ಆತನ ವರ್ಗಾವಣೆ ಆಗಿದೆ ಎಂದು ತಿಳಿದು ಬಂದಿತ್ತು..... ಇದರ ನಂತರ ನನ್ನ ಪಾಪಪ್ರಜ್ನೆ ಇನ್ನೂ ಹೆಚ್ಚಾಗಿತ್ತು..... ಆತನಿಗೆ ಏನಾದರೂ ಸಹಾಯ ಮಾಡಬೇಕಿತ್ತು ಎನ್ನುವ ನನ್ನ ಒಳಮನಸ್ಸು ಚುಚ್ಚುತ್ತಿತ್ತು...... ಆದರೆ ಆತನ ವಿಳಾಸ ತಿಳಿಯದೇ ಪೇಚಿಗೆ ಸಿಲುಕಿದ್ದೆ.... ಏನೂ ಮಾಡಲು ಆಗದೇ ಒದ್ದಾಡುತ್ತಿದ್ದೆ..... ಆತನಿಗೆ ಸಿಕ್ಕು ಕ್ಷಮಾಪಣೆ ಕೇಳಬೇಕು ಎಂದು ತುಂಬಾ ದಿನದಿಂದ ಆಶಿಸುತ್ತಿದ್ದೆ.......

ಇದೆಲ್ಲಾ ನಡೆದು ಹನ್ನೆರಡು ವರ್ಷವಾಗಿತ್ತು....


ಆತನನ್ನು ಭೇಟಿ ಮಾಡಿ ಕ್ಷಮೆ ಕೇಳಬೇಕೆಂದುಕೊಂಡ  ದಿನ ಬಂದೇ ಬಿಟ್ಟಿತ್ತು.....

" ಸರ್, ಎಲ್ಲಿಗೆ ಹೋಗಬೇಕು " ಎಂದು ಕೇಳುತ್ತಿದ್ದ ಕಾರ್ ಡ್ರೈವರ್..... ನಾನು  ಹೋಟೆಲ್ ಕಡೆ ಕೈ ತೋರಿಸಿ, ತಲೆ ಹೊರಗಡೆ ಹಾಕಿ ಆತನನ್ನು ಹುಡುಕುತ್ತಿದ್ದೆ.... ಆತ ಬಸ್ ಸ್ಟಾಂಡ್ನಲ್ಲಿ ನಿಂತಿದ್ದ.... ಕಂಡ ಕೂಡಲೇ ಅಕ್ಷರಶಃ ಕೆಳಗೆ ಜಿಗಿದು ಓಡಿದೆ.... ಅವನನ್ನು ಬಿಗಿದುಹಿಡಿದೆ...... ಆತನಿಗೆ ನನ್ನ ಗುರುತು ಹಿಡಿಯಲು ಸ್ವಲ್ಪ ಸಮಯ ಹಿಡಿಯಿತು.... ನಾನು ಆತನ ಕೈ ಬಿಡದೇ ಕೇಳಿದೆ....." ಹೇಗಿದ್ದೀಯಾ...... ? ಕೆಲಸ ಮಾಡ್ತಾ ಇದೀಯಾ....? ಹೇಗಿದೆ ನಿನ್ನ ಲೈಫ್...? ಮದುವೆಯಾಗಿದೆಯಾ...? " ಎಂದೆಲ್ಲಾ ಕೇಳುತ್ತಲಿದ್ದೆ....... ಆತ ಶಾಂತವಾಗಿ..." ಎಷ್ಟ್ ಪ್ರಶ್ನಿ ಕೇಳ್ತೀರ್ರಿ ಸರ್ರ್...... ಅಲ್ಲಾ, ಎಟ್ ಚೇಂಜ್ ಆಗೀರ್ರೀ...... ನಾ ಆರಾಮ್ ಅದೀನ್ರೀ..... ಸರಕಾರಿ ಕೆಲ್ಸಾರ್ರೀ...... ಕೆ. ಎಸ್. ಆರ್.ಟಿ. ಯಾಗ್ ಡ್ರೈವರ್ ಆಗಿನ್ರೀ....... ನಿಮ್ ನಂಬರ್ ನಿಮ್ ದೋಸ್ತ್ ಒಬ್ರು ಕೊಟ್ರೀ...... ಅದಕ್ ಫೋನ್ ಮಾಡೀನ್ರೀ....." ನನಗೆ ಹಾಲು ಕುಡಿದ ಹಾಗಾಯಿತು....... ಆತನನ್ನು ಭೇಟಿಯಾಗಿ ಮಾತನಾಡಿದ್ದೆ ನನ್ನ ಅರ್ಧ ಪಾಪಪ್ರಜ್ನೆ ಯನ್ನು ಕಡಿಮೆ ಮಾಡಿತ್ತು.......

ಆತನ ಜೊತೆ ಊಟ ಮಾಡಿದೆ.....ಸ್ವಲ್ಪ ಸಿಹಿ ತಿಂಡಿ ಕಟ್ಟಿಸಿ ಕೊಟ್ಟೆ...... ಮನೆಗೆ ತೆಗೆದುಕೊಂಡು ಹೋಗಲು ಹೇಳಿದೆ...... ಕೊನೆಯದಾಗಿ ಕೇಳಿದೆ....." ಜಗದೀಶ್, ಆ ದಿನ ನನ್ನ ಕೈಯಲ್ಲಿ ದುಡ್ಡಿರಲಿಲ್ಲ..... ಆ ಬಗ್ಗೆ ನಿನ್ನ ಜೊತೆ ಮಾತನಾಡಿದರೆ ನೀನೆಲ್ಲಿ ಹಣ ಕೇಳುತ್ತೀಯೆನೋ ಎಂದು ನಿನ್ನನ್ನು ಮಾತನಾಡಿಸಿರಲಿಲ್ಲ ಆಗ.... ತಪ್ಪಾಯ್ತು ಕಣೋ..... ಕ್ಷಮಿಸಿಬಿಡು" ಇಷ್ಟು ಹೇಳುವಷ್ಟರಲ್ಲೇ ನನ್ನ ಧ್ವನಿ ತೇವವಾಗಿತ್ತು......" ಹೇ.... ಬಿಡ್ರೀ.... ಸರ್ರ, ನಿಮ್ ಜಾಗ್ದಾಗ್ ನಾನಿದ್ರೂ ಅದೇ ಮಾಡ್ತಿದ್ನೋ ಏನೋ....ಅದ್ಯಾಕೆ ನೆನಪ್ ಮಾಡ್ತೀರ್ರೀ ಈಗ...... ಬಿಡ್ರಲ್ಲಾ...... " ಎಂದ ಶಾಂತವಾಗಿ...... ನನಗೆ ಇನ್ನೂ ಕೇಳಬೇಕಿತ್ತು....... ನಾನು " ಜಗದೀಶ್, ಆ ಹಣ ನಾನು ಕೊಡಲಾ..... ಹೀಗೆ ಕೇಳ್ತಾ ಇದೀನಿ ಅಂತ ಬೇಸರ ಮಾಡಿಕೊಳ್ಳಬೇಡ..." ಎಂದು ಕೇಳಿದೆ ಜೀವವನ್ನು ಹಿಡಿ ಮಾಡಿಕೊಂಡು.....  " ಸರ್ರ.... ಬಿಡ್ರೀ.... ದೇವ್ರು ನಂಗೆ ಒಳ್ಳೇದೆ ಮಾಡ್ಯಾನ್ರೀ....ದುಡ್ಡು ಗಿಡ್ದು ಏನೂ ಬ್ಯಾಡ್ರೀ......ನಿಮ್ಮ ಒಳ್ಳೆ ಮನ್ಸು ಹೀಗೇ ಇರಲ್ರೀ....." ನನ್ನ ಮನಸ್ಸು ತುಂಬಿ ಬಂತು...... ಗಟ್ಟಿಯಾಗಿ ತಬ್ಬಿಕೊಂಡೆ......


                          (ಜಗದೀಶನ ಜೊತೆ  "ಅರ್ಧಚಂದ್ರ ತೇಜಸ್ವಿ" ಯ ಅರ್ಧ ಫೋಟೊ....)

Sep 16, 2010

ಬರೀ ಬಿಳುಪು.....!

ವಾಕಿಟಾಕಿಯಲ್ಲಿ ಸಂದೇಶ ಬರುತ್ತಲೇ ಇತ್ತು......
"ನೀರು ಮೇಲೇರುತ್ತಲೇ ಇದೆ ಸರ್..... ಬೇಗ ಹೊರಟುಬಿಡಿ...."

ಅಣೇಕಟ್ಟಿನಿಂದ ಹೊರಬಿಟ್ಟ ನೀರು ನನಗೆ ಸರಕಾರ ಕೊಟ್ಟ ಮನೆಯ ಒಳಗೆ ಹೊಕ್ಕಿತ್ತು...... ಮಕ್ಕಳು ಹೆಂಡತಿಯನ್ನು ತವರುಮನೆಗೆ ಕಳುಹಿಸಿ ನಾನು ಮುಳುಗುತ್ತಿರುವ ಮನೆಯಿಂದ ಅವಶ್ಯಕ ಮತ್ತು ಪ್ರಮುಖ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದೆ......


ಹೆಂಡತಿಯ ಇಷ್ಟದ ಕಸೂತಿಯ ಪರದೆಗಳು,ಟಿಪಾಯಿಯ ಮೇಲೆ ಹಾಕಿದ ಹೊದಿಕೆ, ಎಲ್ಲವನ್ನೂ ತೆಗೆದುಕೊಂಡಿದ್ದೆ.....
ನನ್ನನ್ನು ಇಷ್ಟಪಡುವ ಹೆಂಡತಿಯ , ನನಗಾಗಿ ಏನನ್ನಾದರೂ ಮಾಡಲು ರೆಡಿಯಾಗಿರುವ ನನ್ನಾಕೆಗೆ ಇದನ್ನಾದರೂ ಮಾಡಬೇಕಾಗಿತ್ತು....

ಸೆಲ್ ಫೊನ್ ರಿಂಗಣಿಸಿತು....
ನೋಡಿದೆ......
ನನ್ನವಳ ಸುಂದರ ಚಿತ್ರದೊಡನೆ ಅವಳ ನಂಬರ್ ಇತ್ತು.....

"ಹೆದರಬೇಡ ಚಿನ್ನ... ನಾನು ಚೆನ್ನಾಗಿದ್ದೇನೆ.....ನಿನ್ನ ಎಲ್ಲಾ ಇಷ್ಟದ ವಸ್ತುಗಳನ್ನು ತೆಗೆದುಕೊಂಡಿದ್ದೇನೆ.... ಈಗಲೇ ಬಿಡುತ್ತಿದ್ದೇನೆ.... ಮಕ್ಕಳನ್ನು ಹೊರಗಡೆ ಬಿಡಬೇಡ" ಎಂದೆ....

"ರೀ......." ಅವಳು ಹೀಗೆ ಕರೆದರೇ ನನಗೆ ಇಷ್ಟ......." ನೀವು ಅಲ್ಲಿಂದ ಇನ್ನೂ ಹೊರಟಿಲ್ಲ ಎಂದಾದರೆ ನಿಮ್ಮ ಸಹಾಯಕರನ್ನಾದರೂ ಕಳಿಸಿ ಹಾಲ್ ನಲ್ಲಿರೋ ಶೊಕೇಸಿನಲ್ಲಿ ನನ್ನ ಅಪ್ಪ ನಿಮಗೆ ಕೊಟ್ಟಿರೊ ಚಿನ್ನದ ಸರ ಸರ ಇದೆ... ತೆಗೆದುಕೊಂಡು ಬನ್ನಿ" ಎಂದಳು......

"ಚಿನ್ನಾ, ನೀರು ತುಂಬಾ ಮೇಲೆರುತ್ತಿದೆ ಕಣೇ..... ನನ್ನ ಸೊಂಟದವರೆಗೂ ಬಂದಿದೆ ನೀರು..... ಈಗ ಹೆಲಿಕಾಫ್ಟರ್ನಿಂದ ಕೆಳಗೆ ಕಾಲಿಟ್ಟರೂ ಕಷ್ಟ ಕಣೇ...." ಎಂದೆ.... "ಸರಿ ನಿಮ್ಮಿಷ್ಟ .. ಬೇಗ ಬನ್ನಿ" ಎಂದು ಹೇಳಿ ಇಟ್ಟಳು.....

 ಆಡಳಿತ ಸೇವೆಯ ಸ್ಪರ್ದಾತ್ಮಕ ಪರೀಕ್ಶೆಯಲ್ಲಿ ಪ್ರಥಮ ಸ್ಥಾನ ಪಡೆದಾಗ ನನ್ನ ಮಾವ ಕೊಟ್ಟ ಚಿನ್ನದ ಸರ ಅದು.... ಆ ಸರದಲ್ಲಿ ನನ್ನ ಹುಡುಗಿ ಕೊಟ್ಟ...  ಲೊಕೆಟ್ ಇತ್ತು......

ಲೊಕೆಟ್ ನೆನಪಾದ ಕೂಡಲೇ ಹೆಲಿಕಾಫ್ಟರ್ನಿಂದ ಕೆಳಕ್ಕೆ ಧುಮುಕಿದೆ..... ನೀರು ಸೊಂಟದವರೆಗೂ ಇತ್ತು..... ನನ್ನ ಜೊತೆ ನನ್ನ ಸಹಾಯಕನೂ ಧುಮುಕಿದ... " ಸರ್, ಹೋಗಬೇಡಿ..ಏನು ಬೇಕು ಹೇಳಿ ನಾನೇ ತರುತ್ತೇನೆ ಸರ್..... ನೀರು ತುಂಬಾ ಜೋರಾಗಿದೆ ಸರ್.."

ನನಗೇನೂ ಕೇಳಿಸುತ್ತಿರಲಿಲ್ಲ....

 ನನಗೆ ಎಲ್ಲಾ ನೆನಪಾಯಿತು.........

ಸ್ಪರ್ಧಾತ್ಮಕ ಪರೀಕ್ಶೆಯ ಕೊನೆಯ ದಿನ ಆ ಹುಡುಗಿ ಕೊಟ್ಟಿದ್ದಳು.....

ನನಗೆ ಉತ್ತೇಜನ ಕೊಟ್ಟವಳು ಅವಳು...

ಅವಳ ನಗೆ ನನಗೆ ಖುಷಿ ಕೊಟ್ಟಿತ್ತು.....

ಅವಳ ಸನಿಹ ನನಗೆ ಹಿತ ನೀಡುತ್ತಿತ್ತು....

ನನ್ನ ಗೆಲುವು ಅವಳಿಗೆ ಮುದ ನೀಡುತ್ತಿತ್ತು.....

ನಮ್ಮ ಸಂಬಂಧಕ್ಕೆ ಹೆಸರು ಇರದೇ ಇದ್ದರೂ ನನಗೆ ಅವಳು ನನ್ನ ಸ್ಪೂರ್ತಿಯಾಗಿದ್ದಳು..... ನಮ್ಮ ಕೊನೆಯ ದಿನ ಅವಳದೊಂದು ಕಪ್ಪು ಬಿಳುಪಿನ ಚಿತ್ರ ಮತ್ತು ಚಿನ್ನದ ಲೊಕೆಟ್ ಕೊಟ್ಟು .... ಕಣ್ಣಲ್ಲಿ ನೀರು ತುಂಬಿಕೊಂಡು ಓಡಿ ಹೋಗಿದ್ದಳು ಹುಡುಗಿ....
ತಿರುಗಿ ಕೂಡ ನೋಡದೆ.......

ನನ್ನ ಕೈಯಿ ನನ್ನ ಕಿಸೆಯ ಮೇಲೆ ಇತ್ತು.....

ಅದರಲ್ಲಿದ್ದ ಅವಳ ಫೋಟೊ ನನಗೆ ಹಿತ ನೀಡುತ್ತಿತ್ತು...

ಅವಳು ಕೊಟ್ಟ ಲೊಕೆಟ್ , ನನ್ನ ಮಾವ ಕೊಟ್ಟ ಸರದ ಜೊತೆ ಸೇರಿ ನನಗೆ ಸ್ಪೂರ್ತಿ ಕೊಡುತ್ತಿತ್ತು.... ಅದನ್ನು ಧರಿಸಿದಾಗ ನನ್ನಾಕೆಯ ಸಂಭ್ರಮ ತೀರದಾಗಿತ್ತು....ಅವಳಿಗಾಗಿ ನಾನು ಅದನ್ನು ದಿನಾಲೂ ಧರಿಸುತ್ತಿದ್ದೆ..... ಅವಳಿಗೆ ತಿಳಿದಿರಲಿಲ್ಲ ನಾನು ಅದನ್ನು  ಧರಿಸುತ್ತಿದ್ದುದು ಆ ಹುಡುಗಿಯ ಲೊಕೆಟ್ ಗಾಗಿ ಎಂದು......

ಹೆಂಡತಿಗೆ ಮೋಸ ಮಾಡುತ್ತಿದ್ದೆನಾದರೂ ಮನಸ್ಸು ಅದಕ್ಕೆ 'ಮೋಸ'ದ ಹೆಸರು ಕೊಟ್ಟಿರಲಿಲ್ಲ.....

ಮನೆಯ ಅರ್ಧ ಬಾಗಿಲಿನವರೆಗೆ ನೀರು ತುಂಬಿತ್ತು.... ರಬಸ ಕೂಡ ಹೆಚ್ಚಿತ್ತು.....

ಒಳ ಮನಸ್ಸು ಯೊಚಿಸುತ್ತಿತ್ತು....
" ಆ ಹುಡುಗಿ ನನ್ನನ್ನು ಮರೆತು ಯಾರ ಜೊತೆಗೋ ಸುಖವಾಗಿ ಇರಬಹುದು.....
 ಅವಳು ನನಗೆ ಕೊಟ್ಟ ಕಾಣಿಕೆ ಗೌರವದಿಂದಲೂ ಇರಬಹುದು..
ಆ ಹುಡುಗಿ ಎಂದೋ ಕೊಟ್ಟ ಗಿಫ್ಹ್ಟ್ ಸಲುವಾಗಿ ನಾನು ನನ್ನ ಇವತ್ತಿನ ಜೀವನ ದಾಳವಾಗಿ ಇಡುವುದು ತಪ್ಪು...."

ಆದರೆ ಕಳ್ಳ ಬುದ್ದಿ ಇದನ್ನೆಲ್ಲಾ ಒಪ್ಪಲು ಸಿದ್ದವಿರಲಿಲ್ಲ..... ತುಂಬಾ ಕಷ್ಟಪಟ್ಟು ಮನೆಯ ಒಳಗೆ ಹೋಗಿ ಲೊಕೆಟ್ ಜೊತೆಗೆ ಸರವನ್ನು ಹಿಡಿದಾಗ ಮನಸ್ಸು ಹಗುರಾಗಿತ್ತು.....

ಸಹಾಯಕನ ಜೊತೆ ಸಾವಧಾನವಾಗಿ ನಡೆದು ಬಂದು ಹೆಲಿಕಾಫ್ಟರ್ ಹತ್ತಿ ಕುಳಿತೆ.....

ನೀರು ಅಪಾಯದ ಮಟ್ಟಕ್ಕೆ ಮುಟ್ಟಿದ್ದರಿಂದ ಪೈಲಟ್ ಕೂಡಲೇ ಸ್ಟಾರ್ಟ್ ಮಾಡಿ ಹೊರಟ.....

ಯಾಕೋ ಮನಸು ಆ ಹುಡುಗಿಯ ಸುತ್ತಲೆ ಗಿರಗಿಟ್ಲೆಯಾಡುತ್ತಿತ್ತು.....

ಹೆಂಡತಿಯ ತವರು ಮನೆಯ ಸಮೀಪ ಹೆಲಿಕಾಫ್ಟರ್ ಲ್ಯಾಂಡ್ ಮಾಡಿದರೂ ನನಗೆ ಇಳಿಯುವ ಮನಸ್ಸಿರಲಿಲ್ಲ...... ಕೈಯಲ್ಲಿನ ಲೊಕೆಟ್ ನನ್ನನ್ನು ಬ್ರಮಾಲೋಕಕ್ಕೆ ಕರೆದೊಯ್ದಿತ್ತು.....

ಇನ್ನೂ ಸ್ವಲ್ಪ ಹೆಲಿಕಾಫ್ಟರ್ನಲ್ಲೇ ಕುಳಿತಿರಲು ನೆವ ಬೇಕಿತ್ತು... ಅದಕ್ಕಾಗಿ ಅಲ್ಲೇ ಕುಳಿತು  ಹೆಂಡತಿಯ ಇಷ್ಟದ ಒಂದೊಂದೇ ವಸ್ತುಗಳನ್ನು ಕೆಳಕ್ಕೆ ಇಳಿಸಿ ಕಳಿಸುತ್ತಿದ್ದೆ...

 ಬಾಗಿಲಲ್ಲೆ ನಿಂತಿದ್ದ ನನ್ನಾಕೆ ಅವೆಲ್ಲವನ್ನು ಕಿರುಗಣ್ಣಿಂದಲೂ ನೋಡದೆ ಒಳಗೆ ಕಳಿಸುತ್ತಿದ್ದಳು.....

ನಾನು ದೂರದಿಂದಲೇ ಇದನ್ನೆಲ್ಲಾ ಗಮನಿಸುತ್ತಿದ್ದೆ.....   ತುಂಬಾ   ಕಷ್ಟಪಟ್ಟು ಅವಳ ಇಷ್ಟದ ವಸ್ತುಗಳನ್ನು ತಂದಿದ್ದೆ...... ಇವಳ್ಯಾಕೆ ಅದರ ಬಗ್ಗೆ ಗಮನವನ್ನೂ ಹರಿಸುತ್ತಿಲ್ಲ.....

ಇವಳಿಗೇನಾದರೂ ನನ್ನ ಲೊಕೆಟ್ ಕಥೆ ಗೊತ್ತಿದೆಯಾ....? ನನ್ನನ್ನು ಪರೀಕ್ಶೆ ಮಾಡಲೇ ಸರ ತರಲು ಹೇಳಿರಬಹುದಾ...?

ಅಷ್ಟು ತಂಪು ವಾತಾವರಣದಲ್ಲೂ ಸಣ್ಣಗೆ ಬೆವೆತೆ....

ಮನಸ್ಸು ಕೆಡುಕು ಯೊಚಿಸುತ್ತಿತ್ತು......

ಏನಾದರಾಗಲಿ ಎಂದು ಅವಳತ್ತ ನಡೆದೆ.....

ನನ್ನ ಕೈಲಿದ್ದ ಫೊಟೊ ಅಲ್ಬಂ ಅವಳು ತೆಗೆದುಕೊಂಡಳು....

ನನ್ನ ಎದೆ ಬಡಿತ ನನಗೇ ಕೇಳಿಸುತ್ತಿತ್ತು.....

ಅವಳು ನನ್ನನ್ನೇ ನೋಡುತ್ತಿದ್ದಳು....

" ನೋಡಮ್ಮಾ, ನಿನಗೆ ಬೇಕೆಂದಿದ್ದ ಎಲ್ಲಾ ವಸ್ತುಗಳನ್ನು ತಂದಿದ್ದೇನೆ..... ಕಸೂತಿಯ ಪರದೆಗಳು, ನಿನ್ನ ನೆಚ್ಚಿನ ಅಡುಗೆ ಸಾಮಾನು, ಮಕ್ಕಳ ಫೋಟೊ ಆಲ್ಬಂ ಎಲ್ಲಾ ತಂದಿದ್ದೇನೆ......ನೀನು ಹೇಳಿದ ಹಾಗೆ ಮಾವನವರು ಕೊಟ್ಟ ಸರ ತರಲು ನಾನು ತುಂಬಾ ಪ್ರಯಾಸಪಟ್ಟೆ ಗೊತ್ತಾ..."

ನನಗೆ ಗೊತ್ತಿತ್ತು ನಾನು ಸರ ತರಲು ಯಾಕೆ ಹೋಗಿದ್ದು ಎಂದು...

ಆದರೆ ಮೂಳೆ ಇಲ್ಲದ ನಾಲಿಗೆ ಸುಳ್ಳು ಹೇಳುತ್ತಿತ್ತು....

ಅವಳು ಕೈಲಿದ್ದ ಆಲ್ಬಂ ಬಿಸಾಡಿಬಿಟ್ಟಳು.....

ಸುತ್ತಲಿದ್ದ ಜನರನ್ನೂ ಲೆಕ್ಕಿಸದೇ ನನ್ನನ್ನು ಬಿಗಿದಪ್ಪಿದಳು......

" ಅಲ್ಲಾರೀ... ನನಗೇನೂ ಬೇಡಾರಿ...... ನಿಮ್ಮ ಜೀವಕ್ಕಿಂತ ಹೆಚ್ಚಾ ಈ ವಸ್ತುಗಳು ನನಗೆ.... ಅಪ್ಪ ಕೊಟ್ಟ ಸರ ತರಲು ನೀವು ನೀರಲ್ಲಿ ಹೋದ ವಿಷಯ ನಿಮ್ಮ ಸಹಾಯಕ ಹೇಳಿದಾಗ ನನ್ನ ಜೀವ ಬಾಯಿಗೆ ಬಂದಿತ್ತುರೀ........ ನನಗೇನೂ ಬೇಡಾರೀ..... ನೀವು ಬಂದಿರಲ್ಲ..... ಅಷ್ಟೇ ಸಾಕು .. " ಎಂದು ಬಿಗಿದಪ್ಪಿದಳು.....

ಇಷ್ಟು ಪ್ರೀತಿಸುವ ಹೆಂಡತಿ ಬಿಟ್ಟು ನಾನು ಎನೇನೋ ಯೋಚಿಸಿಬಿಟ್ಟೆನಲ್ಲಾ.......

ಇವಳ ಪ್ರೀತಿ ಬಿಟ್ಟು ನಾನು  ಎಂದೋ ಕೊಟ್ಟ ಗಿಫ್ಟ್ ,ಅದನ್ನು ಕೊಟ್ಟ ಹುಡುಗಿಯನ್ನು ನೆನಸಿಕೊಂಡು ನನ್ನ ಹೆಂಡತಿಗೆ ಮೋಸ ಮಾಡುತ್ತಿದ್ದೆನಲ್ಲಾ.....
ನನ್ನ ಜೊತೆ ನನ್ನ ಸಂಸಾರಕ್ಕೂ , ಮಕ್ಕಳ ಭವಿಷ್ಯಕ್ಕೂ ಹೆಣಗಾಡುತ್ತಿರುವ ನನ್ನಾಕೆಯ ಬಿಟ್ಟು ಆ ಹುಡುಗಿಯ ನೆನಪು ಮಾಡಿಕೊಳ್ಳುವುದು ನನಗೆ ನಾನೇ ಮಾಡಿಕೊಳ್ಳುವ ಮೋಸ ಎನಿಸಲು ಶುರು ಆಯಿತು......

ಹೌದು ಇದಕ್ಕೆಲ್ಲಾ ಒಂದು ಅಂತ್ಯ ಹಾಡಲೇ ಬೇಕು....

ನನ್ನಾಕೆಗೆ ಸಮಾಧಾನ ಮಾಡಿ ಬಟ್ಟೆ ಬದಲಾಯಿಸಲು ನನ್ನ ರೂಮಿಗೆ ಬಂದೆ......

ಇಷ್ಟು  ಪ್ರೀತಿಯಿಂದ.. ಮಮತೆಯಿಂದ ನೋಡಿಕೊಳ್ಳುವ ನನ್ನಾಕೆಯ ಎದುರು ನಾನು  ಬಹಳ ಸಣ್ಣವನಾಗಿ ಬಿಟ್ಟಿದ್ದೆ .

    ಶರ್ಟ್ ಕಿಸೆಯಲ್ಲಿದ್ದ ಆ ಹುಡುಗಿಯ ಫೊಟೊ ನನ್ನ ಚಿತ್ತ ಕೆಣಕುತ್ತಿತ್ತು.....
    ಬೇಡ....
    ಬೇಡ....
    ಇನ್ನೆಂದೂ ಅವಳ ನೆನಪು ಮಾಡಿಕೊಳ್ಳಬಾರದು....
    ನನ್ನಾಕೆಗೆ ಮೋಸ ಮಾಡಬಾರದು......

    ಕಿಸೆಗೆ ಕೈಹಾಕಿ ಫೊಟೊ ಹೊರ ತೆಗೆದೆ......
    ಕೊರಳಲ್ಲಿದ್ದ ಲೊಕೆಟ್ ತೆಗೆದೆ....

    ಎರಡನ್ನೂ ಕಿಟಕಿಯ ಹೊರ ಬಿಸಾಡೋಣ ಎಂದುಕೊಂಡು ಕಿಟಕಿಯ ಪಕ್ಕ ಬಂದೆ......
    ಹೇಗೂ... ಫೋಟೋ  ಹೊರಗೆ ಎಸೆಯುತ್ತಿದ್ದೆ...

ನನ್ನ ಕಳ್ಳ ಮನಸ್ಸು  .... !!

ಒಮ್ಮೆ ನೋಡಿಬಿಡಬೇಕೆನ್ನುವ  ಆಸೆ ಜಾಸ್ತಿಯಾಯಿತು....

 ಇದೇ ಕೊನೆಯ ಸಾರಿಯಲ್ಲವಾ.... ಒಮ್ಮೆ ನೋಡಿ ಬಿಸಾಡೋಣ.......

ಹೊರಗೆ ತೆಗೆದೆ...

ಇಲ್ಲಿಯವರೆಗಿನ ನನ್ನ ಏಕಾಂತದಲ್ಲಿ...
ನನ್ನ ಒಂಟಿತನದ ಬೇಸರದಲ್ಲಿ.... ಕದ್ದು ಕದ್ದು    ಸಾಂತ್ವನ ಕೊಡುತ್ತಿದ್ದ   ಈ  ಫೋಟೋ...!!

    ಕೈಲಿದ್ದ ಫೋಟೊ ನೋಡಿದೆ........

    ಅಚ್ಚ ಬಿಳುಪಿತ್ತು........!!

    ಫೋಟೊ ಹಿಂಬದಿಯ ಬಿಳುಪಿರಬಹುದು ಎಂದು ತಿರುಗಿಸಿ ನೋಡಿದೆ.....

    ಅಲ್ಲೂ ಅಚ್ಚ ಬಿಳುಪಿತ್ತು.....!!

    ಆಗ ನೆನಪಾಯಿತು..... ಮಳೆಯಲ್ಲಿ ನೆನೆದಿದ್ದು.....



    ಕಿಸೆಯಲ್ಲಿನ ಫೋಟೊ ಒದ್ದೆಯಾದದ್ದು......


ಕಪ್ಪು ಬಿಳುಪು...
ಒದ್ದೆಯಾಗಿ...
 ಬರಿ ಬಿಳುಪು ಮಾತ್ರ  ಉಳಿದಿತ್ತು.... !






(ನನ್ನಲ್ಲಿ ಈ ಕಥೆಯನ್ನು ಬರೆಯಿಸಿದ ಪ್ರಕಾಶಣ್ಣನಿಗೆ ಈ ಕಥೆಯ ಶ್ರೇಯ ಸಲ್ಲುತ್ತದೆ..... ಕಥೆಯನ್ನು ತಿದ್ದಿ ತೀಡಿದ್ದಾರೆ.....
ತಪ್ಪಿದ್ದರೆ ಅದು ನನ್ನದು... )

Sep 4, 2010

ತಪ್ಪು ಯಾರದು..?

ನನ್ನ ಗುರಿ ತಲುಪಲು ಇನ್ನು ಐವತ್ತು ಕಿಲೊ ಮಿಟರ್ ಅಷ್ಟೇ ಇತ್ತು....... ಕಣ್ಣೂ ಜೊಂಪು ಹತ್ತಿತ್ತು........ ನನಗೆ ನಿದ್ದೆ ಬಂದರೆ ಅಷ್ಟೆ... ನನ್ನ ಸಂಗಡ ಪ್ರಯಾಣ ಮಾಡುತ್ತಿದ್ದವರೆಲ್ಲಾ ಶಿವನ ಪಾದ ಸೇರಬೇಕಾಗುತ್ತದೆ ಎಂದು ತಲೆ ಕೊಡವಿಕೊಂಡೆ.... ತಲೆ ಎತ್ತಿ ಮೇಲೆ ನೋಡಿದೆ, ಮೇಲೆ "ಭಾರತೀಯ  ರೈಲ್ವೆ " ಎಂದು ಬರೆದಿತ್ತು.... ಕೈಯಲ್ಲಿ ಮುಂಬಯಿ ಮಂಗಳೂರು ರೈಲಿನ ಚುಕ್ಕಾಣಿ ಇತ್ತು...... ಎರಡೂ ಕಡೆ ಇರುವ ಹಸಿರು ಮನವನ್ನು ಖುಶಿಗೊಳಿಸಿತ್ತು.... ತುಂಬಾ ದಿನದ ನಂತರ ರಜೆ ತೆಗೆದುಕೊಂಡು ಹೊಗುವವನಿದ್ದೆ ಈ ಪ್ರಯಾಣ ಮುಗಿಸಿ...... ಮನೆಯಲ್ಲಿ ಕಾಯುತ್ತಿರುವ ಹೆಂಡತಿ ಮಗನ ನೆನಪಾಗಿ ಸ್ವಲ್ಪ ವೇಗ ಜಾಸ್ತಿ ಮಾಡಿದೆ........ ರೈಲು ಉಡುಪಿ ಸ್ಟೇಷನ್ ಬಿಟ್ಟು ಮಂಗಳೂರು ಕಡೆ ಹೊರಟಿತ್ತು......ಈ ಸಾರಿ ಹೆಂಡತಿಯ ಜೊತೆ ವೈದ್ಯರಲ್ಲಿಗೆ ಹೋಗಿ ಎರಡನೇ ಮಗುವಿಗಾಗಿ ನಮ್ಮ ಪ್ರಯತ್ನದ ಬಗ್ಗೆ ತಿಳಿಸಿ ಅವರ ಸಲಹೆ ಕೇಳಬೇಕು..... ಮಗನ ಜೊತೆ ಆಟ ಆಡಲು ಒಬ್ಬಳು ಮಗಳು ಬಂದರೆ ಎಲ್ಲರಿಗೂ ಖುಶಿಯಾಗುತ್ತಿತ್ತು..... ಇದೆಲ್ಲಾ ಯೊಚನೆಯಲ್ಲಿ ಯಾವಾಗ ಸುರತ್ಕಲ್ ಬಂತೋ ತಿಳಿಯಲೇ ಇಲ್ಲ.... ಎರಡು ನಿಮಿಷದ ನಿಲುಗಡೆ ನಂತರ ಮುಂದಕ್ಕೆ ಹೊರಳಿಸಿದೆ ..... ಸ್ವಲ್ಪವೇ ದೂರದಲ್ಲಿ, ಇನ್ನೊಂದು ಸ್ಟೇಶನ್ ಕಟ್ಟುವ ಕೆಲಸ  ನಡೆಯುತ್ತಿತ್ತು...... ಸುತ್ತಲೆಲ್ಲಾ ಕಾಮಗಾರಿ ಕೆಲಸಗಾರರು ಗುಡಿಸಲು ಕಟ್ಟಿಕೊಂಡಿದ್ದರು..... ಮಕ್ಕಳೆಲ್ಲಾ ರೈಲಿನ ಹಳಿಯ ಪಕ್ಕದಲ್ಲೇ ಆಟವಾಡಿಕೊಂಡಿದ್ದರು.... ಎಂದಿನ ಹಾಗೆ ಮಕ್ಕಳಿಗೆ ಟಾಟಾ ಹೇಳಿದೆ..... ಅವರೂ ಕೂಡ ನನಗೆ ಟಾಟಾ ಮಾಡಿ ಕೂಗುತ್ತಿದ್ದರು....

ಈ ಮಕ್ಕಳಿಗೆ ವಿದ್ಯಾಭ್ಯಾಸ ಸಿಗದೇ ಇವರೂ ಕೂಲಿ ಮಾಡಬೇಕಾಗುತ್ತದೆ.... ಇವರ ಪಾಲಕರಾದರೂ ಎಲ್ಲಿ ಅಂತ ಶಾಲೆಗೆ ಸೇರಿಸುತ್ತಾರೆ....ಇವತ್ತು ಇಲ್ಲಿ ಕೆಲಸ ಮಾಡಿದರೆ, ನಾಳೆ ಎಲ್ಲಿಯೊ..? ಅಪ್ಪ ಅಮ್ಮ ಇಬ್ಬರೂ ಕೆಲ್ಸ ಮಾಡದಿದ್ದರೆ ಸಂಜೆಗೆ ಗಂಜಿಯೇ ಗತಿ..... ಅನಕ್ಷರತೆ ಇವರನ್ನು ಸಂತಾನ ನಿಯಂತ್ರಣದ ಬಗ್ಗೆ  ಅರಿವು ದೊರಕಿಸಲೇ ಇಲ್ಲ.... ಒಬ್ಬರಿಗೆ ನಾಲ್ಕು ಐದು ಮಕ್ಕಳಿರುತ್ತಾರೆ.... ಹದಿನೈದು ವರ್ಷಕ್ಕೇ ಕೆಲಸಕ್ಕೆ ಸೇರಿಸುತ್ತಾರೆ..... ಇದರ ಬಗ್ಗೆ ಯೊಚಿಸುತ್ತಾ ಹೊರಟವನಿಗೆ ದೂರ ಹಳಿ ಮೇಲೆ ಯಾರೋ ನಡೆದು ಬರುವ ಹಾಗೆ ಕಂಡರು.....  "ಇದು ಯಾರಪ್ಪಾ..?" ಎಂದುಕೊಂಡೆ...... ಸ್ವಲ್ಪ ಹತ್ತಿರ ಬಂದೊಡನೆ ನಾಲ್ಕು ಜನ ಇದ್ದಂತೆ ಕಂಡಿತು...... ಹಳಿಯ ಪಕ್ಕದಲ್ಲೇ ನಿಂತಿದ್ದರು...... ನನ್ನ ರೈಲು ತುಂಬಾ ಸ್ಪೀಡ್ ಇತ್ತು.....ಇನ್ನೂ ಹತ್ತಿರ ಬರುತ್ತಲೇ ಇನ್ನೂ ಸ್ಪಷ್ಟವಾಗಿ ಕಾಣಿಸುತ್ತಿತ್ತು.... ಒಬ್ಬ ಗಂಡಸು, ಒಬ್ಬಳು ಹೆಂಗಸು, ಅವರಿಬ್ಬರ ಕೈಲಿ ಒಬ್ಬೊಬ್ಬರು ಮಕ್ಕಳು.... ಹೆಂಗಸಿನ ಕಂಕುಳಲ್ಲಿ ಇನ್ನೊಂದು ಮಗು ಕೂಡ ಇತ್ತು..... "ಇವರೇನು ಮಾಡ್ತಾ ಇದಾರೆ ಇಲ್ಲಿ" ಎನಿಸಿಕೊಂಡೆ....  ರೈಲು ಅವರ ಹತ್ತಿರಕ್ಕೆ ಬರುತ್ತಾ ಇತ್ತು......... ಗಂಡಸು , ಹೆಂಗಸಿಗೆ ಬೆನ್ನ ಮೇಲೆ ಹೊಡೆದ.... ಅವಳು ತನ್ನ ಕೈಲಿದ್ದ ಹುಡುಗನನ್ನು ಕರೆದುಕೊಂಡು ಹಳಿ ಮೇಲೆ ಮಲಗಿದಳು.... ನನಗೆ ಇದೇನೆಂದು ಅರ್ಥ ಆಗಲಿಲ್ಲ..... ರೈಲಿನ ಸ್ಪೀಡ್ ನೋಡಿದೆ..... ೧೨೫ ಇತ್ತು...... ಗಂಡಸು ಕೂಡ ಅವನ ಕೈಲಿದ್ದ ಮಗುವನ್ನು ಗಟ್ಟಿಯಾಗಿ ಹಿಡಿದು ಹಳಿ ಮೇಲೆಯೆ ಮಲಗಿದ...... ಆಕೆ ತನ್ನ ಕಂಕುಳಲ್ಲಿದ್ದ ಮಗುವನ್ನು ತನ್ನ ಮತ್ತು ಗಂಡಸಿನ ಮಧ್ಯೆ ಮಲಗಿಸಿಕೊಂಡಳು....ಪುಟ್ಟ ಕಂದನಾಗಿತ್ತು ಅದು........ನನಗೆ ಎನೂ ತೊಚಲೇ ಇಲ್ಲ..... ತಲೆ ಹೊರಗೆ ಹಾಕಿ ಕೂಗಿದೆ....." ಎದ್ದೇಳ್ರಲೆ, ಎನ್ ಮಾಡ್ತಾ ಇದ್ದೀರಾ..... ಎದ್ದೇಳಿ....." ನಾನು ಕೂಗುತ್ತಲೇ ಇದ್ದೆ..... ರೈಲಿನ ಸ್ಪೀಡ್ ೧೨೫ ಕ್ಕಿಂತ ಹೆಚ್ಚಿಗೆ ಇತ್ತು..... ಬ್ರೇಕ್ ಮೇಲೆ ಕಾಲಿಟ್ಟೆ...... ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಸಂಖ್ಯೆ ಸಾವಿರಕ್ಕೂ ಹೆಚ್ಚಿತ್ತು.... ನಾನು ಇಷ್ಟು ಸಡನ್ ಆಗಿ ಬ್ರೇಕ್ ಒತ್ತಿದರೆ, ಹಿಂದಿದ್ದ ಬೋಗಿಗಳೆಲ್ಲ ತಲೆ ಮೇಲಾಗುತ್ತದೆ..... ಸಾವಧಾನವಾಗಿ ಬ್ರೇಕ್ ತುಳಿಯೊಣವೆಂದರೆ, ಅವರು ಮಲಗಿದ್ದ ಸ್ಥಳ ಹತ್ತಿರದಲ್ಲೇ ಇತ್ತು..... ಇನ್ನೊಮ್ಮೆ ತಲೆ ಹೊರಗೆ ಹಾಕಿ ಕೂಗಿದೆ.... ನನ್ನ ಪಕ್ಕದಲ್ಲಿದ್ದ ಸಿಗ್ನಲ್ ಹುಡುಗನೂ ಕೂಗಲು ಶುರು ಮಾಡಿದ....  " ಬೇಗ ಎದ್ದೇಳಿ, ಸಾಯುತ್ತೀರಾ " ......

ನನಗೆ ಎನೂ ಮಾಡಲು ತಲೆ ಹೊಳೆಯಲೇ ಇಲ್ಲ..... ನನ್ನ ಪಕ್ಕದ ಸಿಗ್ನಲ್ ಹುಡುಗ ಕೂಗುತ್ತಲೆ ಇದ್ದ.... ಆ ಗಂಡಸಿನ ಪಕ್ಕದಲ್ಲಿ ಮಲಗಿದ್ದ ಹುಡುಗ ಎದ್ದೇಳಲು ನೋಡಿದ .... ಆದರೆ ಆ ಗಂಡಸು ಆತನನ್ನು ಅಲ್ಲೇ ಅಮುಕಿ ಹಿಡಿದ...... ಇವರ್ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾ ಇದ್ದಾರೆ..? ನಾನು ಏನು ಮಾಡಲಿ...? ಬ್ರೇಕ್ ಒತ್ತಿ ಬಿಡಲೆ...? ಇವರ ಮೇಲೆ ರೈಲು ಹತ್ತಿಸಿ ಬಿಡಲೇ....? ನನ್ನ ತಲೆ ಗೊಂದಲದ ಗೂಡಾಗಿತ್ತು....... ಬ್ರೇಕ್ ಒತ್ತಿದರೆ ಪ್ರಯಾಣಿಕರೆಲ್ಲಾ ಸಾಯುತ್ತಾರೆ...... ನನ್ನ ಕಾಲು ನಿಧಾನವಾಗಿ ಬ್ರೇಕ್ ಒತ್ತಲು ಶುರು ಮಾಡಿತ್ತು.... ಈ ಮಧ್ಯೆ ಆ ಹೆಂಗಸು ತಲೆ ಎತ್ತಿ ನೋಡಿದಳು..... ನಾನು ತಲೆ ಹೊರಗೆ ಹಾಕಿ, ಕೈ ಸನ್ನೆ ಮಾಡಿ ಹೊರಗೆ ಹೋಗಲು ಹೇಳಿದೆ..... ನನ್ನ ಪಕ್ಕದ ಹುಡುಗ ಕೂಗುತ್ತಲೇ ಇದ್ದ.... ಅವಳು ರೈಲಿನ ಕಡೆ ನೋಡಿ ಮತ್ತೆ ಮಲಗಿಕೊಂಡಳು.... ನಾನು " ಅಯ್ಯೋ ದೇವರೇ" ಎಂದೆ...... ರೈಲಿನ ಸ್ಪೀಡ್ ಸ್ವಲ್ಪ ಕಡಿಮೆಯಾಗಿತ್ತು ...... ೧೦೦ ರ ಹತ್ತಿರ ಇತ್ತು........ ಇನ್ನೂ ಕಡಿಮೆ ಮಾಡಲು ನೋಡಿದೆ...... ಸಣ್ಣದಾಗಿ ಜರ್ಕ್ ಹೊಡೆದ ಹಾಗಾಯಿತು..... ನನಗೆ ಹೆದರಿಕೆ ಆಗಲು ಶುರು ಆಯಿತು..... ಈ ಐದು ಜನರ ಪ್ರಾಣ ಉಳಿಸಲು ಹೋಗಿ ಸಾವಿರಾರು ಜನರ ಪ್ರಾಣ ಪಣಕ್ಕಿಡೋದು ಸರಿ ಕಾಣಲಿಲ್ಲ..... ಕಾಲನ್ನು ಬ್ರೇಕ್ ಮೇಲಿಂದ ತೆಗೆಯಲಿಲ್ಲ..... ರೈಲು ಪ್ರಾಧಿಕಾರದ ನಿಯಮದಂತೆ ಪ್ರಯಾಣಿಕರ ಪ್ರಾಣ ಉಳಿಸಲು ಮುಂದಾದೆ..... ಎಷ್ಟು ಕೂಗಿಕೊಂಡರೂ ಅವರು ಎದ್ದೇಳಲೇ ಇಲ್ಲ..... ಆತ್ಮಹತ್ಯೆಗೆ ನಿಶ್ಚಯ ಮಾಡಿಕೊಂಡೇ ಬಂದವರಂತೆ ಕಂಡರು.... ನಾನು ಅಸಹಾಯಕನಾಗಿದ್ದೆ...... ಅವರು ಮಲಗಿದ್ದ ಸ್ಥಳ ಹತ್ತಿರ ಬಂದಿತ್ತು..... ಕ್ಯಾಬಿನ್ ಗ್ಲಾಸ್ ನಿಂದ ಅವರನ್ನು ಸ್ಫಷ್ಟವಾಗಿ ನೋಡಿದೆ...... ಗಂಡಸಿನ ಪಕ್ಕದ ಹುಡುಗ ಕೊಸರಿಕೊಳ್ಳಲು ಪ್ರಯತ್ನ ಪಡುತ್ತಿದ್ದ.... ಹಾಗೆಯೇ, ಹೆಂಗಸಿನ ಪಕ್ಕದ ಹುಡುಗನೂ ಕೊಸರುತ್ತಿದ್ದ... ಇಬ್ಬರೂ ಮಕ್ಕಳನ್ನು ಅವರ ಪಕ್ಕದಲ್ಲಿದ್ದ ಗಂಡು , ಹೆಂಗಸು ಗಟ್ಟಿಯಾಗಿ ಹಿಡಿದುಕೊಂಡಿದ್ದರು..... ಅವರಿಬ್ಬರ ಮಧ್ಯೆ ಮಲಗಿದ್ದ ಮುದ್ದಾದ ಮಗು ಕೈಕಾಲು ಆಡಿಸುತ್ತಾ ಮಲಗಿತ್ತು..... ಮಗುವಿನ ಮುದ್ದಾದ ಮುಖ ಕೊನೆಯ ಬಾರಿ ನೋಡಿ ಕಣ್ಣು ಮುಚ್ಚಿದೆ...... ...ನನ್ನ ಪಕ್ಕದ ಹುಡುಗ.." ಅಯ್ಯೋ" ಎಂದಿದ್ದು ಕಿವಿಗೆ ಬಿತ್ತು............ ರೈಲಿನ ಸದ್ದು ಸತ್ತ ಜನರ ಕೊನೆಯ ಕೂಗನ್ನೂ ಅಳಿಸಿಹಾಕಿತ್ತು........ 


ಏನು ಮಾಡುವುದೆಂದೇ ತಿಳಿಯಲಿಲ್ಲ..... ಸ್ಟೇಷನ್ ಗೆ ವೈರ್ಲೆಸ್ ಸಂದೇಶ ಕೊಟ್ಟೆ...... ಮುಂದಿನ ಸ್ಟೇಷನ್ ನಲ್ಲಿ ನಿಲ್ಲಿಸಿ ರಿಪೋರ್ಟ್ ಬರೆದು ಹೋಗಲು ತಿಳಿಸಿದರು.....  ನನ್ನ ಮನಸ್ಸು ನನ್ನ ಹಿಡಿತದಲ್ಲಿ ಇರಲಿಲ್ಲ..... ನಮ್ಮ ರೈಲು ಕಂಕನಾಡಿ ಸ್ಟೇಷನ್ನಲ್ಲಿ ನಿಂತಿದ್ದಾಗಲೇ "ಮಂಗಳಾ ಎಕ್ಸ್ ಪ್ರೆಸ್ಸ್ " ಹಾದು ಹೋಗುತ್ತದೆ ಎಂದಿದ್ದರಿಂದ ನಾವು ಸ್ವಲ್ಪ ಕಾಯಬೇಕಾಯಿತು.... ಅಷ್ಟರಲ್ಲಿ ಅಲ್ಲಿ ಸತ್ತವರ ವಿವರ ವೈರ್ಲೆಸ್ಸ್ ಮೂಲಕ  ನನ್ನ ಕಿವಿಗೆ ಬೀಳತೊಡಗಿತು...... " ಸತ್ತವರು ಗಂಡ ಹೆಂಡತಿಯರಂತೆ... ಇಬ್ಬರು ಮಕ್ಕಳು ಕೂಡ ಸತ್ತಿದ್ದಾರೆ......... " ನಾನು ತಕ್ಷಣ ವಾಕಿಟಾಕಿ ತೆಗೆದುಕೊಂಡು " ಅವರ ಮಧ್ಯೆ ಒಂದು ಮಗು ಇತ್ತಲ್ಲ..? " ಎಂದೆ ಒಂದೇ ಉಸುರಿನಲ್ಲಿ....... " ಹೌದು.... ಆ ಮಗು ಹಳಿಯ ಮಧ್ಯೆ ಇದ್ದುದರಿಂದ ಆ ಮಗುವಿಗೆ ಎನೂ ಆಗದೇ ಬದುಕುಳಿದಿದೆ..." ಉತ್ತರ ಕೇಳಿ ನನಗೆ ಖುಶಿ ಪಡಲೋ, ಆ ಮಗುವಿನ ಪಾಲಕರು ಸತ್ತಿದ್ದಕ್ಕೆ ದುಃಖ ಪಡಲೋ ತಿಳಿಯಲಿಲ್ಲ......." ನನಗೆ ಅವರ ಮನೆ ಎಲ್ಲಿದೆ..? ಅವರ ಬಂಧುಗಳ ವಿಳಾಸ ನನಗೆ ತಿಳಿಸಿ" ಎಂದೆ ವಾಕಿಟಾಕಿಯಲ್ಲಿ...... ಮಂಗಳಾ ಎಕ್ಸ್ ಪ್ರೆಸ್ಸ್ ದಾಟಿ ಹೋದ ನಂತರ ಮಂಗಳೂರು ಸೆಂಟ್ರಲ್ ಗೆ ರೈಲನ್ನು ತಲುಪಿಸಿದರೂ ನನ್ನ ಮನಸ್ಸು ಪೂರಾ ಸತ್ತ ಜನರ ಸುತ್ತಲೇ ಸುತ್ತುತ್ತಿತ್ತು........

ರೈಲಿನ ರಿಪೋರ್ಟ್ ಎಲ್ಲಾ ಬರೆದು ಮನೆಗೆ ಹೊರಡುವ ವೇಳೆಗೆ ನನಗೆ ಅಲ್ಲಿ ಸತ್ತವರ ವಿವರ ಎಲ್ಲಾ ತಿಳಿದಿತ್ತು...... ಸತ್ತವರು, ಉತ್ತರ ಕರ್ನಾಟಕದವರೆಂದೂ, ಅಲ್ಲಿ ಪ್ರವಾಹ ಬಂದು ಇವರ ಬದುಕೆಲ್ಲಾ ಕೊಚ್ಚಿ ಹೋದಾಗ..... ಇಲ್ಲಿ ಕೆಲಸಕ್ಕೆಂದು ಬಂದವರಿಗೆ ಕೆಲಸಕ್ಕೆ ತಕ್ಕ ಸಂಬಳ ಸಿಗದೇ ನಿರಾಸೆಯಲ್ಲಿದ್ದರು..... ಪ್ರವಾಹ ಬಂದು ಹಾಳಾದ ಊರಲ್ಲಿ ತಮಗೆಲ್ಲಾ ಸರಕಾರ ಮನೆ ಕಟ್ಟಿಸಿ ಕೊಡುತ್ತದೆ ಎಂದು ಖುಶಿಯಲ್ಲಿದ್ದ ದಂಪತಿಗಳಿಗೆ , ತಮ್ಮ ಹೆಸರಲ್ಲಿ ಬೇರೆ ಯಾರೋ ಮನೆ, ಜಮೀನನ್ನು ಪಡೆದಿದ್ದಾರೆ ಎಂದು ತಿಳಿದಾಗ ದಿಕ್ಕೇ ತೋಚದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸಿಕ್ಕಿತು....   ಆತ್ಮಹತ್ಯೆಗೆ ಕಾರಣ ಯಾರೋ ಆದರೂ ನನ್ನ ರೈಲಿನಡಿ ಸಿಕ್ಕಿ ಸತ್ತಿದ್ದಕ್ಕಾಗಿ ನನ್ನಲ್ಲಿ ಪಾಪಪ್ರಜ್ನೆ ಕಾಡುತ್ತಿತ್ತು...... ಅವರ ಮನೆಯ ವಿಳಾಸ ಸಿಕ್ಕಿದ್ದರಿಂದ ಆ ಕಡೆಯೇ ಹೊರಟೆ......

ಅಲ್ಲಿ ಮುಟ್ಟುವ ವೇಳೆ ಕತ್ತಲಾಗುತ್ತಿತ್ತು...... ಮನೆ ಎಂದು ಕರೆಸಿಕೊಳ್ಳುವ ಜೊಪಡಿಯಲ್ಲಿ ಅವರೆಲ್ಲಾ ಇದ್ದರು...... ಸುತ್ತಮುತ್ತಲೆಲ್ಲಾ ಸಣ್ಣ ಸಣ್ಣ ಗುಡಿಸಲುಗಳು ಇತ್ತು.... ಆಗಲೇ ಶವವನ್ನು ತಂದಿದ್ದರು....ಬಟ್ಟೆಯಲ್ಲಿ ಮುಚ್ಚಿದ್ದರು...... ನನ್ನ ಕಣ್ಣು ಬದುಕುಳಿದ ಆ ಮಗುವನ್ನು ಹುಡುಕುತ್ತಿತ್ತು..... ಅಲ್ಲಿದ್ದ ಹಿರಿಯರನ್ನು ವಿಚಾರಿಸಿದೆ..... " ಆ ಮಗುವಿನ ಭವಿಶ್ಯಕ್ಕೆ ಏನು..? ಮಗುವಿನ ಬಂಧುಗಳ ಬಳಿ ಸ್ವಲ್ಪ ಹಣ ಸಹಾಯ ಮಾಡುತ್ತೇನೆ... " ಎಂದೆ..... ನನ್ನ ಪಾಪಪ್ರಜ್ನೆಯನ್ನು ಸ್ವಲ್ಪವಾಗಿಯಾದರೂ ಕಡಿಮೆ ಮಾಡಿಕೊಳ್ಳುವ ಉದ್ದೇಶ ನನ್ನದಾಗಿತ್ತು....... " ಇಲ್ಲ ಸರ್, ಆ ಮಗುವಿಗೆ ಯಾರೂ ಇಲ್ಲ.... ಊರಿಗೆ ನೆರೆ ಬಂದಾಗ ಎಲ್ಲಾ ಬಂಧುಗಳೂ ಸತ್ತು ಹೋಗಿದ್ದರು..... ಈಗ ಮಗುವಿನ ಹೆತ್ತವರು ಸತ್ತು ಹೋದರು.... ಈಗ ಮಗುವನ್ನು ನೋಡಿಕೊಳ್ಳುವವರು ಯಾರೂ ಇಲ್ಲ..... ಗಂಡು ಮಗುವಾಗಿದ್ದರೆ ಎಲ್ಲರ ಜೊತೆ ಎಲ್ಲೆಲ್ಲೋ ಇದ್ದು ಬೆಳೆಯುತ್ತಿತ್ತು... ಈ ಹೆಣ್ಣುಮಗು ಯಾರಲ್ಲಿ ಬೆಳೆಸೋದು... ಜಗತ್ತು ತುಂಬಾ ಕೆಟ್ಟಿದೆ ಯಜಮಾನರೇ...." ಎಂದರು ಆ ಹಿರಿಯರು..... ಈಗ ನಿಜವಾಗಿಯೂ ನನ್ನ ಸ್ಥಿತಿ ಗಂಭೀರವಾಯಿತು..... ಸ್ವಲ್ಪ ಸಹಾಯ ಮಾಡಿ ಹೋಗೋಣ ಎಂದು ಬಂದವನಿಗೆ ಕಾಲಿಗೇ ತೊಡರಿಕೊಂಡಿತ್ತು....... ಸ್ವಲ್ಪ ಯೋಚಿಸಿ ಆ ಹಿರಿಯರಿಗೆ ಕೇಳಿದೆ...... " ಈ ಮಗುವನ್ನು ನನಗೆ ಕೊಡಿ, ನಾನು ನೋಡಿಕೊಳ್ಳುತ್ತೇನೆ.... ನನ್ನ ಮಗನ ಜೊತೆಗೆ ಈ ಹುಡುಗಿಯೂ ಬೆಳೆಯಲಿ.... ಮಗುವಿಗೆ ಒಳ್ಳೆಯ ವಿದ್ಯೆ ಕೊಟ್ಟು ಅವಳ ಬದುಕು ಕಟ್ಟಿ ಕೊಡುತ್ತೇನೆ" ಎಂದೆ.... ಆ ಕಡೆ ಆ ಮಗುವಿನ ಪಾಲಕರ ಅಂತ್ಯಕ್ರೀಯೆಗೆ ಪ್ರಯತ್ನ ನಡೆಯುತ್ತಿತ್ತು...... ಆ ಹಿರಿಯ ಸ್ವಲ್ಪ ಯೋಚನೆ ಮಾಡಿ ಆ ಕಡೆ ಹೋದರು.....

ತಿರುಗಿ ಬಂದ ಹಿರಿಯರ ಕೈಯಲ್ಲಿ ಆ ಮಗುವಿತ್ತು..... ನನ್ನ ಕೈಯಲ್ಲಿಟ್ಟು ಆ ಹಿರಿಯರೆಂದರು...." ಈ ಮಗು ತನ್ನ ಪಾಲಕರ ಅಂತ್ಯಕ್ರಿಯೆಯಲ್ಲಿ ಇರದೇ ತಮ್ಮನ್ನೇ ತನ್ನ ಪಾಲಕರೆಂದು ತಿಳಿದು ಬೆಳೆಯಲಿ..... ಈ ಮಗುವಿನ ಪಾಲನೆ ಚೆನ್ನಾಗಿ ಮಾಡಿ , ಚೆನ್ನಾಗಿ ಬೆಳೆಸಿರಿ "....... ನನ್ನ ಕೈಯಿ ನಡುಗುತ್ತಿತ್ತು............ ಈ ಮಗುವಿನ ಅಂತ್ಯಕ್ಕೆ ಕಾರಣ ನಾನು ಎಂದು ತಿಳಿದಿದ್ದರೆ ಈ ಹಿರಿಯರು ನನಗೆ ಮಗುವನ್ನು ಕೊಡುತ್ತಿದ್ದರೊ ಇಲ್ಲವೋ ತಿಳಿದಿಲ್ಲ...... ನನ್ನ ಕೈಲಿದ್ದ ಸ್ವಲ್ಪ ಹಣವನ್ನು ಆ ಹಿರಿಯರಿಗೆ ಕೊಟ್ಟು ಸತ್ತವರ ಅಂತ್ಯಕ್ರೀಯೆಗೆ ಉಪಯೋಗಿಸಿ ಎಂದು ಹೇಳಿ ನಾನು ಮಗುವನ್ನೆತ್ತಿಕೊಂಡು ನನ್ನ ಮನೆ ಹಾದಿ ಹಿಡಿದೆ......

ಬೆನ್ನ ಹಿಂದೆ ಬೆಂಕಿಯ ಜ್ವಾಲೆ ಮೇಲೇಳುತ್ತಿತ್ತು......