Jun 20, 2010

'ಅನುಭವ' ಮೊದಲನೆಯದು...........

ಮನಸ್ಸು ತುಂಬಾ ಖುಷಿಯಾಗಿತ್ತು...... ಹೆದರಿಕೆಯೂ ಇತ್ತು.....ಹೊಸದೊಂದು ಅನುಭವಕ್ಕೆ ಮೈ ಮನಸ್ಸು ಕಾತುರಗೊಂಡಿತ್ತು..... ಟಿ. ವಿ. ಯಲ್ಲಿ ನೋಡಿದ್ದೆ..... ಅನುಭವಿಸಿದವರ ಬಾಯಲ್ಲಿ ಕೇಳಿದ್ದೆ...... ಒಬ್ಬನೇ ಈ ಸಾಹಸಕ್ಕೆ ಕೈ ಹಾಕಲು ಧೈರ್ಯ ಇರಲಿಲ್ಲ.... ನನ್ನ ಗೆಳೆಯರಾದ ವೆಂಕಟೇಶ್, ನಾಗರಾಜ್ ನನ್ನ ಕಾತುರ ಕಂಡು ಈ ದಿನವನ್ನು ಆರಿಸಿದ್ದರು...... ಇಬ್ಬರೂ ನನ್ನ ಶಾಲಾ ಸಹಪಾಟಿಗಳಾಗಿದ್ದರು.. ...... ಆದ್ರೆ ಈ ಅನುಭವ ಪಡೆಯೋ ಮನಸ್ಸು ಮಾಡಿದಾಗ ನಾನು ಕೆಲಸ ಸೇರಿದ್ದೆ...... ನನ್ನ ಗೆಳೆಯ ನಾಗರಾಜನಂತೂ ನನ್ನನ್ನ ಮಾನಸಿಕವಾಗಿ ರೆಡಿ ಮಾಡಿದ್ದ..... ವೆಂಕಟೇಶನಿಗೆ ಮನಸ್ಸಿಲ್ಲದಿದ್ದರೂ, ನನಗಾಗಿ ಜೊತೆಯಾಗಲು ಮನಸ್ಸು ಮಾಡಿದ್ದ..... ನಾಗರಾಜ ಈ ಮೊದಲು ಒಂದೆರಡು ಸಲ ಈ ಅನುಭವ ಪಡೆದಿದ್ದ ಎಂದೇ ಹೇಳಿದ್ದ......'' ಸಕತ್ ಕಣೋ, ಏನೋ ಒಂಥರಾ ಆಕಾಶದಲ್ಲಿ ತೇಲೋ ಥರ ಆಗತ್ತೆ ........ ಇದರ ಖರ್ಚು ಎಲ್ಲಾ ನಂದೇ... ಒಂದು ಸಲ ನೋಡು... ಮುಂದಿನ ಸಲ ನೀನೆ ನನ್ನನ್ನು ಕರೀತೀಯಾ'' ಅಂದ...... ''ಸರಿಯಪ್ಪಾ ನಡಿ, ಮೊದಲು ಅನುಭವಿಸಿ ನಂತರ ನೋಡ್ತೀನಿ..... ಏನಾದರೂ ತೊಂದರೆ ಆದರೆ ಜಾಡಿಸಿ ಒದಿತೀನಿ'' ಅಂದ ವೆಂಕಿ...... ' ಮಗನೆ, ಏನಾದರೂ ಯಾರ ಕೈಲಾದರೂ ಸಿಕ್ಕಿ ಬಿದ್ದರೆ, ನಿನ್ನ ತಿಥಿ ಮಾಡಿ ಬಿಡ್ತೀನಿ'' ಎಂದೆ ನಾನು....... ' ಏನೂ ಆಗಲ್ಲ ನಡೀರಿ' ಅಂದ ನಾಗ......


ಎಲ್ಲದಕ್ಕೂ  ಮೊದಲು ಚೆನ್ನಾಗಿ ಊಟ ಮುಗಿಸಿದೆವು....... ಹೊರಗಡೆ ಬಂದು ನೋಡಿದೆ, ತುಂಬಾ ಜನ ಪರಿಚಯದವರ  ಹಾಗೆ ಕಂಡರು......ಎಲ್ಲರೂ ನಮ್ಮನ್ನೇ  ನೋಡುತ್ತಿದ್ದಾರೆ  ಎನಿಸುತ್ತಿತ್ತು..... ನನಗಂತೂ ಬೆವರೊಡೆಯಲು ಶುರು ಮಾಡಿತ್ತು...... ನಾಗ , ಗೂಡಂಗಡಿ ಕಡೆಗೆ ನಡೆದ....... ನಾನು, ವೆಂಕಿ ಸ್ವಲ್ಪ ದೂರ ಹೋಗಿ ನಿಂತೆವು....... ನಾಗ ಗೂಡಂಗಡಿಯವನ ಜೊತೆ ಏನೋ ಕೇಳಿದ, ಅವನು ತೆಗೆದು ಕೊಟ್ಟ...... ನಾಗ ಒಳ್ಳೆ ಅನುಭವಸ್ತನ ಹಾಗೆ, ಹುಷಾರಾಗಿ ಪೇಪರ್ನಲ್ಲಿ ಸುತ್ತಿ ಕಿಸೆಯಲ್ಲಿ ಇಟ್ಟುಕೊಂಡ...... ಆ ಕಡೆ, ಈ ಕಡೆ ನೋಡಿ ನಮ್ಮತ್ತ ಬಂದ....... ' ನಡೀರೋ, ಅಲ್ಲಿ ಎಲ್ಲಾ ರೆಡಿಯಾಗಿದೆ' ಎಂದ...... ನಾನು '' ಯಾಕೋ ಹೆದರಿಕೆ ಆಗ್ತಾ ಇದೆ ಕಣ್ರೋ'' ಎಂದೆ..... '' ಮಗನೆ, ಹೀಗೆ  ಮಾಡೋಣ ಎಂದವನೂ ನೀನೆ, ಈಗ ಹೆದರುವವನೂ ನೀನೆ, ನಡಿ, ಏನಾಗತ್ತೋ ನೋಡೋಣ ಒಂದು ಕೈ ನೋಡೇ ಬಿಡೋಣ '' ಎಂದ ವೆಂಕಿ..........




ಸ್ಸರಿ.........., ಬಂದವರೇ  , ನಾಗರಾಜ  ಅಂಗಡಿಯಿಂದ  ಏನೋ ತೆಗೆದುಕೊಂಡು ಕಿಸೆಗೆ ಹಾಕಿಕೊಂಡ......ನಂತರ ನಮ್ಮ ಸವಾರಿ  ಸೈಕಲ್ ಹತ್ತಿ ಹೊರಟೆವು............ ನನ್ನ ಪ್ರಶ್ನೆ  ಮುಂದುವರಿದಿತ್ತು.......'' ಮುಗಿದ ನಂತರ ತುಂಬಾ ಕಷ್ಟ ಆಗತ್ತಾ..? ಬೇರೆಯವರೀಗೆ  ಗೊತ್ತಾಗತ್ತಾ....? ಜಾಗ ಸೇಫ್ ಆಗಿದೆ ತಾನೇ....? ಹಸಿವೆ  ಆದರೆ ಏನಾದರೂ ಇದೆಯಾ ತಿನ್ನಲಿಕ್ಕೆ.....?   ಎಲ್ಲರಿಗೂ ಚಾನ್ಸ್ ಇದೆ ತಾನೇ....?'' ಸೈಕಲ್ ಹಿಂದೆ ಕುಳಿತಿದ್ದ ವೆಂಕಿಯ ಕೈ ನನ್ನ ತಲೆ ಮೇಲೆ ಬೀಳದೆ ಇದ್ದರೆ , ನನ್ನ ಪ್ರಶ್ನೆ ಇನ್ನೂ ಮುಂದುವರಿಯುತ್ತಿತ್ತು......... ನಮ್ಮ ಸವಾರಿ, ಒಂದು ಕಾಡಿನ ತನಕ ಬಂದು ನಿಂತಿತ್ತು........ ಸೈಕಲ್ ನ್ನು ಒಂದು ಪೊದೆಯ ಹಿಂದೆ ಇಟ್ಟು, ಕಾಡಿನ ಒಳಗೆ ಹೋದೆವು....... ಅಷ್ಟೇನೂ ಘನವಾದ ಕಾಡೆನೂ ಆಗಿರಲಿಲ್ಲ...... ಸ್ವಲ್ಪ  ದೂರ ಹೋಗಿ, ನೆಲದ ಮೇಲೆ ಕುಳಿತೆವು........ ಒಬ್ಬರ ಮುಖ ಇನ್ನೊಬ್ಬರು ನೋಡಿಕೊಂಡೆವು........


ನಾಗರಾಜ, ಕಿಸೆಯಿಂದ ಪೇಪರ್ನಲ್ಲಿ ಸುತ್ತಿದ್ದನ್ನ ಹೊರತೆಗೆದ....... ''ಇದರ ಹೆಸರೇನು'' ಎಂದು ಕೇಳಿದೆ ನಾನು........' classic menthol ' ....... ''ಎಷ್ಟು ಕೂಲ್ ಆಗಿರತ್ತೆ  ಗೊತ್ತಾ......ಗಂಟಲಿಗೆ ಹೋದ ನಂತರ  ಕೂಲ್ ಕೂಲ್...... ಒಂದು ಸಲ ಸೇದಿದರೆ, ಇನ್ನೊಮ್ಮೆ ಸೇದಬೇಕು   ಅನಿಸತ್ತೆ'' ಅಂದ...... ..... ನಾನೂ ಸಹ ಇದರ ಬಗ್ಗೆ ತುಂಬಾ ಕೇಳಿದ್ದೆ...... ಒಂದು ಸಲ ಅನುಭವಿಸಿಯೇ ಬಿಡೋಣ ಎಂದು ಈ ಸಾಹಸಕ್ಕೆ ಕೈ ಹಾಕಿದ್ದೆವು......... ಮೊದಲ  ಸಲ ಆದ್ದರಿಂದ ಮತ್ತು ತಪ್ಪು ಎಂದು ಗೊತ್ತಿದ್ದರಿಂದ ಹೀಗೆಲ್ಲಾ ಕಾಡಿಗೆ ಬಂದು ಈ ಮಹತ್ಕಾರ್ಯಕ್ಕೆ ಮುಂದಾಗಿದ್ದೆವು..... ......


'' ಒಬ್ಬೊಬ್ಬರಿಗೆ, ಎರಡೆರಡು ತಂದಿದ್ದೇನೆ  ..... ಏನೂ ಆಗಲ್ಲ.... ಇದನ್ನ ಮುಗಿಸಿಯೇ ಹೊರಡಬೇಕು '' ಅಂದ ನಾಗರಾಜ......   ನಾನು, ವೆಂಕಿ ನಮ್ಮ ಪಾಲನ್ನು ಪಡೆದು, ಬಾಯಿಗಿಟ್ಟುಕೊಂಡೆವು  ..... ನಾಗರಾಜನ ಇನ್ನೊಂದು ಕಿಸೆಯಿಂದ ಬೆಂಕಿ ಪೊಟ್ಟಣ ಹೊರ ಬಂತು..... ನಾಗರಾಜ , ನುರಿತ ಸೇದುಗಾರನಾಗಿದ್ದ...... ಸಲೀಸಾಗಿ, ಬೆಂಕಿ ಹಚ್ಚಿಕೊಂಡ....... ನಾನು , ವೆಂಕಿ ಸ್ವಲ್ಪ ಕಷ್ಟಪಟ್ಟೆವು..... ಬೆಂಕಿ ತಾಗಿಸುವ ಸಮಯಕ್ಕೇ, ಉಸಿರನ್ನು ಒಳಗೆ ತೆಗೆದುಕೊಳ್ಳಬೇಕು ಎಂದು ನಮಗೆ ತೋಚಿಯೇ ಇರಲಿಲ್ಲ.....ನಮಗೆ ಅದು ಸಾಧ್ಯವಾಗದೆ ಇದ್ದಾಗ ನಾಗರಾಜನೆ , ಹಚ್ಚಿ ಕೊಟ್ಟ......ಬಾಯಿಗಿಟ್ಟ ಕೂಡಲೇ, ತುಟಿ ಚುರ್ ಎಂದಿತು..... ಆದರೂ ಏನೋ ಒಂಥರಾ....... ವೆಂಕಿಯನ್ನು ನೋಡಿದೆ....... ಅವನದೂ ನನ್ನದೇ ಪಾಡು..... ಮುಖ ಇಂಗು ತಿಂದವನ ಹಾಗಿತ್ತು...... ನಾಗರಾಜ ಮಾತ್ರ ರಾಜನ ಹಾಗೆ ಎಳೆಯುತ್ತಿದ್ದ ದಮ್ಮು....... ನನ್ನ ಮೊದಲನೇ ದಮ್ಮು ಒಳಗೆಳೆದುಕೊಂಡೆ..... ತಂಬಾಕಿನ ಹೊಗೆಯ ಗಾಳಿ, ನಾಲಿಗೆಯನ್ನು ಸೋಕಿ ಕಹಿಯ ಅನುಭವವಾಯಿತು.... ಸಿಗರೇಟು ಕೈಯಲ್ಲಿ ಹಿಡಿದು , ಹೊಗೆಯನ್ನು ಹೊರಗೆ ಬಿಟ್ಟೆ...... ನಾಲಿಗೆ ಪೂರಾ ಕಹಿ ಕಹಿ ಎನಿಸಲು ಶುರು ಮಾಡಿತ್ತು....... ಬಾಯಿಯ ಒಳ ಮೈಯಿ, ಸುಟ್ಟ ಅನುಭವ ನೀಡಿತ್ತು..... '' ಥೂ.... '' ಎನ್ನುತ್ತಿದ್ದ ವೆಂಕಿ......... '' ಏನೆಂದೇ ಮಗನೆ, ಬಾಯಿ, ಗಂಟಲು  ಎಲ್ಲಾ ಕೂಲ್ ಆಗತ್ತೆ ಎಂದ್ಯಲ್ಲಾ........ ಎಲ್ಲಾ ಉರಿಯುತ್ತಿದೆ ಇಲ್ಲಿ'' ಎಂದೆ.......... ವೆಂಕಿಯೂ ದನಿಗೂಡಿಸಿದ......... '' ಮಕ್ಕಳೇ, ಹೊಗೆಯನ್ನು ಗಂಟಲಿನ ತನಕ ಎಳೆದುಕೊಂಡು ಸ್ವಲ್ಪ ಹೊತ್ತು ಇಟ್ಟುಕೊಂಡು ನಂತರ ಹೊರಗೆ ಬಿಡಿ...... ಆಗ ತಿಳಿಯತ್ತೆ ಇದರ ರುಚಿ '' ಎಂದ........ ನಾನು ವೆಂಕಿ ಮುಖ ಮುಖ ನೋಡಿಕೊಂಡೆವು...... 'ಇರಲಿ, ಇದನ್ನೂ ನೋಡೇ ಬಿಡೋಣ' ಎಂದುಕೊಂಡು ಮತ್ತೊಮ್ಮೆ ತುಟಿಗಿಟ್ಟೆ  ...... ಎರಡನೇ  ದಮ್ಮೂ ಒಳಗೆ ಹೋಗಲು ಶುರು ಮಾಡಿತು...... ಮೊದಲು ನಾಲಿಗೆ ಮುಟ್ಟಿದ ಹೊಗೆ, ಕ್ರಮೇಣ ತನ್ನ ಪಯಣವನ್ನು ಗಂಟಲಿನತ್ತ ಮುಂದುವರಿಸಿತ್ತು...... ನಾಗರಾಜ ಹೇಳಿದ್ದನಲ್ಲ,  ಗಂಟಲಿನಲ್ಲೇ  ಇಟ್ಟುಕೊಳ್ಳಬೇಕು ಅಂತ..... ಸ್ವಲ್ಪ ಹೊತ್ತು ಇಟ್ಟುಕೊಂಡೆ....... ಹೊಗೆ ತನ್ನ ಕರಾಮತ್ತು ತೋರಲು ಶುರು ಮಾಡಿತ್ತು...... ಗಂಟಲಲ್ಲಿ ತಂಪಿನ ಅನುಭೂತಿ ಶುರು  ಆಗುವುದರಲ್ಲಿತ್ತು........ ಅಷ್ಟರಲ್ಲೇ....... ಅದೆಲ್ಲಿತ್ತೋ........... ಕೆಮ್ಮು........ಕೆಮ್ಮು......... ಕೆಮ್ಮು.........


       ಬಾಯಲ್ಲಿ..... ಮೂಗಲ್ಲಿ....ಕಣ್ಣಲ್ಲಿ..... ಹೊಗೆ ಹೊರ ಬಂದ ಹಾಗಾಗಿತ್ತು.......  ಬಾಯಲ್ಲಿ ನೀರು..... ಕಣ್ಣಲ್ಲಿ ನೀರು ........ ಕೆಮ್ಮಿ ಕೆಮ್ಮಿ ಸುಸ್ತಾಗಿ, ವೆಂಕಿಯನ್ನು ನೋಡಿದೆ........ ಅವನ ಪರಿಸ್ತಿತಿ ಬೇರೆ ಏನೂ ಆಗಿರಲಿಲ್ಲ..... ನಾಗರಾಜ  ಮಾತ್ರ ಬಿಂದಾಸ್ ಆಗಿ ಹೊಗೆ ಬಿಡುತ್ತಿದ್ದ....... ಕೊನೆಯಲ್ಲಿ ನನ್ನ ಅರ್ಧ  , ವೆಂಕಿ ಅರ್ಧ  ಸಿಗರೇಟು ಸಹ ಅವನ ಬೆರಳುಗಳ ಮದ್ಯೆ ಇತ್ತು...... ತೋರು ಬೆರಳು, ಮಧ್ಯ ಬೆರಳು , ಕಿರು ಬೆರಳುಗಳ ಮಧ್ಯೆ ಮೂರು ಸಿಗರೇಟು ರಾರಾಜಿಸುತ್ತಿತ್ತು..... ನಮ್ಮ ಕೆಮ್ಮು ಮುಗಿದು ಒಂದು ಹಂತಕ್ಕೆ ಬಂದಿದ್ದೆವು........ ನಾಲಿಗೆ, ಬಾಯಿ ಕಹಿ..ಕಹಿ..... ಸುಟ್ಟ ಹಾಗಾಗಿತ್ತು....... ನಾಗರಾಜ ' ಏನು ಹುಡುಗ್ರಪ್ಪಾ, ಒಂದು ಸಿಗರೇಟು ಸೇದಲಿಕ್ಕೂ ಬರಲ್ಲ'' ಎಂದು ಎದ್ದು ನಿಂತ.... ನನಗೋ..... ಜಾಡಿಸಿ ಒದೆಯೋಣ ಎನಿಸಿತು.......  ಅರ್ಜಂಟಾಗಿ, ಬಾಯಿಗೆ ಏನಾದರೂ ಉಪಚಾರ ಮಾಡಬೇಕಿತ್ತು...... ಸೈಕಲ್ ಹತ್ತಿ , ಬೇಗ ಬೇಗ ಅಂಗಡಿಗೆ ಬಂದೆವು............ ಅಲ್ಲಿ, ನಮ್ಮ ಬಾಯಿಗಾಗುವ ಮದ್ದು ಏನೂ ಇರಲಿಲ್ಲ...... ಬಾಯಿ ಒಳಗೆ, ಹೊರಗೆ...... ಕೈಯಿ.... ಅಂಗಿ ಎಲ್ಲೆಲ್ಲೂ ಸಿಗರೇಟಿನ ವಾಸನೆ..... ಏನಾದರೂ ಅರ್ಜಂಟಾಗಿ, ಅದರ ವಾಸನೆಗಿಂತಲೂ ಕೆಟ್ಟದ್ದನ್ನು ಬಾಯಿಗೆ ಹಾಕಿಕೊಳ್ಳಬೇಕಿತ್ತು...... ಹುಡುಕಿದೆ..... ಹುಡುಕಿದೆ..... ಸಿಕ್ಕಿದ್ದು.... ಕೊತ್ತಂಬರಿ ಬೀಜ.......... ಗಬಕ್ಕನೆ ಬಾಯಿಗೆ ಹಾಕಿಕೊಂಡೆವು ನಾನು ಮತ್ತು ವೆಂಕಿ...... ನಾಗರಾಜ ಮಾತ್ರ ಕೂಲ್ ಆಗಿದ್ದ...... ಕೊತ್ತಂಬರಿ ಜಗಿದೆ....... ಸಿಗರೇಟಿನದು ಒಂದು ತೂಕದ್ದಾದರೆ, ಕೊತ್ತಮ್ಬರಿಯದ್ದೊಂದು ತೂಕ..... ಆದರೂ ಸಹಿಸಿಕೊಂಡೆ...... ನಾಗರಾಜನನ್ನು ಕೊಂದೇ ಹಾಕುವ ಮನಸ್ಸಾಗಿತ್ತು........




ನಂತರ ಎಂದೆಂದೂ ನಾನು ಸಿಗರೇಟಿಗೆ ತುಟಿ ಸೋಕಿಸಲೇ ಇಲ್ಲ...... ಆದರೂ ಆ ವಾಸನೆ ನನ್ನನ್ನು ಬೆನ್ನತ್ತುತ್ತಲೇ ಇದೆ...... ನನ್ನ ಗೆಳೆಯ ನಾಗರಾಜನ ನೆನಪಿನ ಹಾಗೆ......